ಸರ್ಕಾರಕ್ಕೆ ನೈತಿಕತೆ ಇದ್ದರೆ ಪ್ರಿಯಾಂಕ್ ಮೇಲೆ ಕೇಸ್ ದಾಖಲಿಸಲಿ: ಅಶ್ವಥ್ ನಾರಾಯಣ್

Public TV
2 Min Read

ಬೆಂಗಳೂರು: ಸರ್ಕಾರಕ್ಕೆ ನೈತಿಕತೆ ಇದ್ದರೆ ಪ್ರಿಯಾಂಕ್ ಖರ್ಗೆ ಮೇಲೆ ಕೇಸ್ ದಾಖಲಿಸಲಿ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ.

ಆರ್‌ಎಸ್‌ಎಸ್ ಚಟುವಟಿಕೆ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದರು. ಇಂತಹ ಘನಂದಾರಿ ಕೆಲಸ ಮಾಡಿರುವ ಪ್ರಿಯಾಂಕ್ ಖರ್ಗೆಯವರನ್ನು ಪತ್ರ ನೀಡಿದ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ವಜಾ ಮಾಡಬೇಕಿತ್ತು ಎಂದಿದ್ದಾರೆ. ಇದನ್ನೂ ಓದಿ: RSS ಇಂದಿರಾ ಗಾಂಧಿಗೆ ಹೆದರಿಲ್ಲ, ನೆಹರೂ ಮುಂದೆ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?- ಸುನಿಲ್ ಕುಮಾರ್

ಪ್ರಚಾರದ ಗೀಳು:
ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಯಾವಾಗಲೂ ಅಪ್ರಸ್ತುತ ಹೇಳಿಕೆ ಕೊಟ್ಟು ಸುದ್ದಿಯಲ್ಲಿರುವ ಮಂತ್ರಿ. ಅವರಿಗೆ ಯಾವಾಗಲೂ ಪ್ರಚಾರದಲ್ಲಿರುವ ಗೀಳು. ಅವರು ಏನು ಮಾತಾಡುತ್ತಿದ್ದಾರೆ ಅನ್ನೋದೇ ಅವರಿಗೆ ಗೊತ್ತಿಲ್ಲ. ದುರುದ್ದೇಶದಿಂದ ಸಿಎಂಗೆ ಈ ಪತ್ರವನ್ನು ಬರೆದಿದ್ದಾರೆ. ಈ ವ್ಯಕ್ತಿ ಯಾವಾಗಲೂ ಅಪ್ರಸ್ತುತ ಮಾತು ಹಾಗೂ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ: ಗೋವಿಂದ ಕಾರಜೋಳ

ಮಗ ಎನ್ನುವುದಷ್ಟೇ ಅರ್ಹತೆ:
ಇವರಿಗೆ ಮಲ್ಲಿಕಾರ್ಜುನ ಖರ್ಗೆಯವರ ಮಗ ಎನ್ನುವುದಷ್ಟೇ ಅರ್ಹತೆ. ಜ್ಞಾನ ಇಲ್ಲದಿದ್ದರೂ ಕುಳಿತಲ್ಲೇ ಅಧಿಕಾರ ಮಾಡುತ್ತಾರೆ. ಬರೀ ವಂಶಪಾರಂಪರ್ಯವಾಗಿ ಬಂದಿರುವವರಿಗೆ ಯಾವ ಅರ್ಹತೆ ಇದೆ. ನಿಮ್ಮ ಸಾಧನೆ ಹಾಗೂ ಕೆಲಸ ಮಾತಾಡಬೇಕು. ಪ್ರಿಯಾಂಕ್ ಖರ್ಗೆ ಅವರೇ ಸಮಾಜ ಒಡೆಯುವ ಕೆಲಸ ಮಾಡಬೇಡಿ. ಬದಲಾಗಿ ಬಾಂಧವ್ಯ ಮತ್ತು ಗೌರವವನ್ನು ಹೆಚ್ಚಿಸಿ ಎಂದು ಕಿವಿಮಾತು ಹೇಳಿದ್ದಾರೆ.

ನಿಮ್ಮ ಕೀಳು ಆಲೋಚನೆಗಳಿಗೆ ಜನ ನಗುತ್ತಾರೆ. ನೀವು ಬರೆದಿರುವ ಪತ್ರ ಹಿಂಪಡೆದು ಕ್ಷಮೆಯಾಚಿಸಿ, ತಪ್ಪಿಗೆ ಪಶ್ಚಾತ್ತಾಪ ಪಡಲು ಅವಕಾಶ ಸಿಗುತ್ತದೆ. ಇಂತಹ ಘನಂದಾರಿ ಕೆಲಸ ಮಾಡಿರುವ ಪ್ರಿಯಾಂಕ್ ಖರ್ಗೆಯವರನ್ನು ಪತ್ರ ನೀಡಿದ ಕೂಡಲೇ ಸಿಎಂ ವಜಾ ಮಾಡಬೇಕಿತ್ತು. ಸಿದ್ದರಾಮಯ್ಯನವರೇ ಶತಮಾನೋತ್ಸವ ಆಚರಿಸಿಕೊಂಡಿರುವ ಆರ್‌ಎಸ್‌ಎಸ್ ಅನ್ನು ಕೆಟ್ಟದಾಗಿ ನಡೆಸಿಕೊಳ್ಳಲು ನಿಮಗೆ ಆತ್ಮಸಾಕ್ಷಿ ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮಿಂದ RSS ಬ್ಯಾನ್ ಅಸಾಧ್ಯ: ಪ್ರತಾಪ್ ಸಿಂಹ

ಇವರಿಗೆ ಬಯ್ಯಲು ಹೋದರೆ ನಾವೇ ಕೀಳುಮಟ್ಟಕ್ಕೆ ಹೋಗುತ್ತೇವೆ. ಸರ್ಕಾರಕ್ಕೆ ನೈತಿಕತೆಯನ್ನೋದು ಇದ್ದರೆ ಪ್ರಿಯಾಂಕ್ ಖರ್ಗೆ ಮೇಲೆ ಕೇಸ್ ದಾಖಲಿಸಲಿ ಎಂದು ಹೇಳಿದ್ದಾರೆ.

ಮ್ಯೂಸಿಕಲ್ ಚೇರ್
ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಸಂಸ್ಕೃತಿ, ನಿಯಮ ನನಗೆ ಗೊತ್ತಿಲ್ಲ. ಆದರೆ ಮೊದಲ ದಿನದಿಂದಲೂ ಇಬ್ಬರಲ್ಲೂ ಕಾದಾಟ ಇದೆ. ಅದು ಸ್ಪಷ್ಟವಾಗಿ ಕಾಣುತ್ತಿದೆ. ಪರಮೇಶ್ವರ್ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಮ್ಯೂಸಿಕಲ್ ಚೇರ್ ಆಗಿದೆ. ಯಾರು ಎತ್ಕೊಂಡು ಹೋಗ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Share This Article