ಬೆಂಗಳೂರು: ನಟ್ಟು ಬೋಲ್ಟ್ ವಿಚಾರಕ್ಕೂ ಬಿಗ್ಬಾಸ್ ಶೋ (Biggboss Show) ಬಂದ್ ಆಗಿದ್ದಕ್ಕೆ ಯಾವುದೇ ಸಂಬಂಧ ಇಲ್ಲ. ಈ ವಿಚಾರದಲ್ಲಿ ಸುದೀಪ್ಗೂ ಡಿಕೆಶಿ ಅವರಿಗೂ ತಂದಿಡೋದು ಬೇಡ ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.
ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಎಂಬ ಜೆಡಿಎಸ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಟ್ಟು ಬೋಲ್ಟಿಗೂ ಬಿಗ್ಬಾಸ್ ಶೋ ಬಂದ್ ಆಗಿದ್ದಕ್ಕೂ ಏನು ಸಂಬಂಧ? ನಟ್ಟು ಬೋಲ್ಟ್ ವಿಚಾರಕ್ಕೂ ಇದ್ದಕ್ಕೂ ಸಂಬಂಧವೇ ಇಲ್ಲ. ನಟ ಸುದೀಪ್ (Kiccha Sudeep) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ನಡುವೆ ತಂದಿಡೋದು ಬೇಡ ಎಂದಿದ್ದಾರೆ. ಇದನ್ನೂ ಓದಿ: ಕಲಾವಿದರ ಮೇಲೆ ಸೇಡು ತೀರಿಸಿದ ನಟ್ಟು ಬೋಲ್ಟ್ ಮಿನಿಸ್ಟರ್- ಜೆಡಿಎಸ್ ಕಿಡಿ
ಜೆಡಿಎಸ್ ಅವರು ಹೇಳ್ತಾರೆ. ಅವಘಡಗಳು ನಡೆದ್ರೆ ಯಾರು ಹೊಣೆ ಆಗ್ತಾರೆ? ಇದೇ ಭಾಗದಲ್ಲಿ ಮಂಗಳವಾರ ಸಿಲಿಂಡರ್ ಅವಘಡ ಆಗಿದೆ. ಇದು ಇಂಡಸ್ಟಿçಯಲ್ ಪ್ರದೇಶ ಆಗಿರುವುದರಿಂದ ಅವಘಡಗಳು ಆಗುತ್ತಿವೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬಿಗ್ಬಾಸ್ಗೆ ಬೀಗ| 2 ಸಾವಿರ ಉದ್ಯೋಗಿಗಳಿಗೆ ಸಮಸ್ಯೆ – ಇಂದು ಮಧ್ಯಾಹ್ನ ತುರ್ತು ಅರ್ಜಿ ವಿಚಾರಣೆ
ಜಿಲ್ಲಾಡಳಿತ 15 ದಿನ ಕಾಲಾವಕಾಶ ಕೊಟ್ಟಿರುವ ವಿಚಾರ ನನಗೆ ಗೊತ್ತಿಲ್ಲ. ಡಿಸಿಎಂ ಅವರು ದ್ವೇಷದ ರಾಜಕಾರಣ ಮಾಡಲ್ಲ. ಡಿಕೆಶಿ ಅವರಿಗೆ ಯಾವುದೇ ಹಳೆ ದ್ವೇಷ ಇಲ್ಲ. ಡಿಕೆಶಿ ಅವರೇ ಬಿಗ್ಬಾಸ್ ಶೋಗೆ ಅವಕಾಶ ಕೊಡಿ ಅಂತಾ ಹೇಳಿದ್ದಾರೆ. ಹಾಗಿದ್ದ ಮೇಲೆ ದ್ವೇಷದ ವಿಚಾರ ಎಲ್ಲಿಂದ ಬಂತು ಎನ್ನುವ ಮೂಲಕ ಡಿಸಿಎಂ ಪರ ಬ್ಯಾಟ್ ಬೀಸಿದರು.
ಜಿಲ್ಲಾಡಳಿತವು ಜಾಲಿವುಡ್ ಸ್ಟುಡಿಯೋದವರಿಗೆ ನೋಟಿಸ್ ಕೊಟ್ಟು, ಬಿಗ್ಬಾಸ್ ಮನೆಗೆ ಬೀಗ ಹಾಕಿದ್ದಾರೆ. ಜಾಲಿವುಡ್ ಅವರು ಎನ್ಓಸಿ ಪಡೆದು ಕಾರ್ಯಕ್ರಮ ನಡೆಸಲಿ. ಬಿಗ್ಬಾಸ್ ಶೋ ಅನ್ನು ಒಂದು ತಿಂಗಳು ಮುಂದಕ್ಕೆ ಹಾಕಿದ್ರೆ ಪ್ರಾಣ ಹೋಗಲ್ಲ ಎಂದರು.