ಮಣಿಪುರ | ಭಾರೀ ಮಳೆ – ಹೆಲಿಕಾಪ್ಟರ್‌ ಬಿಟ್ಟು ರಸ್ತೆ ಮಾರ್ಗದಲ್ಲೇ ಚುರಾಚಾಂದ್‍ಪುರಕ್ಕೆ ಮೋದಿ ಪ್ರಯಾಣ

Public TV
2 Min Read
  • ರಸ್ತೆ ಮಾರ್ಗದಲ್ಲಿ ಬಂದಿದ್ದು ಒಳ್ಳೆಯದೇ ಆಯ್ತು – ಪ್ರಯಾಣದ ಅನುಭವ ಹಂಚಿಕೊಂಡ ಪಿಎಂ

ಇಂಫಾಲ: ಮಣಿಪುರದ (Manipur) ರಾಜಧಾನಿ ಇಂಫಾಲದಲ್ಲಿ ಭಾರೀ ಮಳೆಯಾಗುತ್ತಿದ್ದ (Rain) ಕಾರಣ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಸ್ತೆ ಮಾರ್ಗದಲ್ಲೇ ಚುರಾಚಾಂದ್‍ಪುರಕ್ಕೆ (Churachandpur) ಪ್ರಯಾಣ ಬೆಳೆಸಿದ್ದಾರೆ.

ಮಳೆಯಿಂದಾಗಿ ಹೆಲಿಕಾಪ್ಟರ್ (Helicopter) ಹಾರಾಟಕ್ಕೆ ಹವಾಮಾನ ಅನುಕೂಲಕರವಾಗಿಲ್ಲ ಎಂದು ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು. ಇದರಿಂದ ಹೆಲಿಕಾಪ್ಟರ್‌ ಬಳಕೆಯನ್ನು ಮೊಟಕುಗೊಳಿಸಲಾಯಿತು. ಬಳಿಕ ಮೋದಿಯವರು ಸುಮಾರು 61 ಕಿ.ಮೀ ಪ್ರಯಾಣ ಮಾಡಿ, ಚುರಾಚಾಂದ್‍ಪುರ ತಲುಪಿದ್ದಾರೆ. ಇದಕ್ಕೂ ಮುನ್ನ ಜನರೊಂದಿಗೆ ಸಂವಹನ ನಡೆಸಲು ಎಷ್ಟೇ ಸಮಯ ಆದರೂ ಪ್ರಯಾಣ ಮಾಡಲು ಸಿದ್ಧ ಎಂದು ಮೋದಿಯವರು ಹೇಳಿದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಣಿಪುರ ಮಾತುಕತೆ ಸಫಲ; ರಾಷ್ಟ್ರೀಯ ಹೆದ್ದಾರಿ ತೆರೆಯಲು ಕುಕಿ ಗ್ರೂಪ್ ಒಪ್ಪಿಗೆ

ಚುರಾಚಾಂದ್‍ಪುರದಲ್ಲಿ ತಮ್ಮ ರಸ್ತೆ ಪ್ರಯಾಣದ ಅನುಭವವನ್ನು ಜನರೊಂದಿಗೆ ಹಂಚಿಕೊಂಡಿರುವ ಅವರು, ಮಣಿಪುರದ ಜನರ ಉತ್ಸಾಹಕ್ಕೆ ನಾನು ನಮಸ್ಕರಿಸುತ್ತೇನೆ. ಭಾರೀ ಮಳೆಯಲ್ಲೂ ಇಲ್ಲಿಗೆ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮ ಪ್ರೀತಿಗೆ ನಾನು ಕೃತಜ್ಞ. ಭಾರೀ ಮಳೆಯಿಂದಾಗಿ ನನ್ನ ಹೆಲಿಕಾಪ್ಟರ್‌ನಲ್ಲಿ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ರಸ್ತೆ ಮಾರ್ಗದಲ್ಲಿ ಬಂದೆ. ನಾನು ರಸ್ತೆಯ ಮೂಲಕ ಬಂದಿದ್ದು ಒಳ್ಳೆಯದೇ ಆಯ್ತು ಎಂದು ನನ್ನ ಹೃದಯ ಹೇಳುತ್ತದೆ. ದಾರಿಯುದ್ದಕ್ಕೂ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಎಲ್ಲರೂ ನನ್ನನ್ನು ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ. ನನ್ನ ಜೀವನದಲ್ಲಿ ಈ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹಿಂಸಾಚಾರ ಪೀಡಿತ ರಾಜ್ಯದ ಜನರ ಜೀವನವನ್ನು ಮತ್ತೆ ಸರಿದಾರಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ನಾನು ನಿಮ್ಮೊಂದಿಗಿದ್ದೇನೆ ಎಂಬ ಭರವಸೆಯನ್ನು ನೀಡುತ್ತೇನೆ. ಭಾರತ ಸರ್ಕಾರ ಮಣಿಪುರದ ಜನರೊಂದಿಗಿದೆ. ಎಲ್ಲಾ ಗುಂಪುಗಳು ತಮ್ಮ ಕನಸುಗಳನ್ನು ನನಸಾಗಿಸಲು ಶಾಂತಿಯ ಮಾರ್ಗ ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ.

2023 ರಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಅವರು ರಾಜ್ಯಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ. ಮಣಿಪುರದಲ್ಲಿ ಮೇ 2023 ರಲ್ಲಿ ಪ್ರಾಬಲ್ಯ ಹೊಂದಿರುವ ಮೈತೇಯಿ ಸಮುದಾಯ ಮತ್ತು ಕುಕಿ ಬುಡಕಟ್ಟು ಜನಾಂಗದ ನಡುವೆ ಜನಾಂಗೀಯ ಘರ್ಷಣೆಗಳು ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಿಂಸಾಚಾರದಿಂದಾಗಿ 60,000 ಜನರನ್ನು ಸರ್ಕಾರ ನಿರ್ಮಿಸಿದ್ದ ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿತ್ತು. ಇದನ್ನೂ ಓದಿ: ನಿರ್ಲಕ್ಷಕ್ಕೊಳಗಾಗಿದ್ದ ಈಶಾನ್ಯ ಭಾರತ ಈಗ ಅಭಿವೃದ್ಧಿಯ ಎಂಜಿನ್‌: ಮೋದಿ

Share This Article