ಪತ್ನಿ ತಂದೆಯ ಕಿರುಕುಳಕ್ಕೆ ಬೇಸತ್ತ ಯುವಕ ಆತ್ಮಹತ್ಯೆಗೆ ಯತ್ನ!

Public TV
1 Min Read

ಕೊಪ್ಪಳ: ಪತ್ನಿ ತಂದೆಯ ಕಿರುಕುಳಕ್ಕೆ ಬೇಸತ್ತು ಪ್ರೇಮ ವಿವಾಹವಾಗಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ತಾಲೂಕು ಹಿರೇಸಿಂಧೊಗಿ ಗ್ರಾಮದ ವಿನಾಯಕ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು, ಸದ್ಯ ಈತ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಡೆದಿದ್ದೇನು?: ವಿನಾಯಕ, ಸಂಸದ ಕರಡಿ ಸಂಗಣ್ಣ ಬೆಂಬಲಿಗ ಎನ್ನಲಾದ ಬಸವರಾಜ ಬೋವಿ ಮಗಳು ನೇತ್ರಾ ಪರಸ್ಪರ ಪ್ರೀತಿಸಿದ್ರು. ಆದ್ರೆ ಮದುವೆಗೆ ಯುವತಿ ತಂದೆ ಬಸವರಾಜ ವಿರೋಧಿಸಿದ್ದರಿಂದ ಕಳೆದ 1 ವರ್ಷದ ಹಿಂದೆ ವಿನಾಯಕ ಮತ್ತು ನೇತ್ರಾ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದರು. ಅದಾಗಿನಿಂದ ಬಸವರಾಜ ಯುವಕನಿಗೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಿರುಕುಳಕ್ಕೆ ಬೇಸತ್ತ ನವಜೋಡಿ ಕಳೆದ ಎರಡು ತಿಂಗಳ ಹಿಂದೆ ಗದಗ ಜಿಲ್ಲೆ ಮುಂಡರಗಿಗೆ ತೆರಳಿ ಸಂಬಂಧಿಕರ ಮನೆಯಲ್ಲಿ ಇಬ್ಬರೂ ಆಶ್ರಯ ಪಡೆದಿದ್ದರು. ಮಾಹಿತಿ ತಿಳಿದ ಬಸವರಾಜ ಬೋವಿ ಕಳೆದ ಎರಡು ದಿನದ ಹಿಂದೆ ಮುಂಡರಗಿಗೆ ತೆರಳಿ ವಿನಾಯಕ ಮೇಲೆ ಹಲ್ಲೆ ಮಾಡಿ, ಮಗಳನ್ನು ತನ್ನ ಮನೆಗೆ ಕರೆತಂದಿದ್ದಾನೆ. ಈ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೂ ಪ್ರಕರಣ ದಾಖಲಿಸಿಕೊಂಡಿಲ್ಲ. ಇದರಿಂದ ಬೇಸತ್ತ ವಿನಾಯಕ ನಿನ್ನೆ ರಾತ್ರಿ ಆತ್ಮಹತ್ಯೆಗೆ ಯತ್ನಿಸಿ, ಕೊಪ್ಪಳ ಜಿಲ್ಲಾಸ್ಪತ್ರೆ ಸೇರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೊಪ್ಪಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *