ಉದ್ಘಾಟನೆಗೊಳ್ಳದ ರಾಯಣ್ಣನ ಫೈಬರ್ ಮೂರ್ತಿ ತೆರವು ಮಾಡಿ ಕಂಚಿನ ಪುತ್ಥಳಿ ನಿರ್ಮಾಣ: ನಾರಾ ಭರತ್ ರೆಡ್ಡಿ

By
2 Min Read

ಬಳ್ಳಾರಿ: ಈಗಿರುವ ಸಂಗೊಳ್ಳಿ ರಾಯಣ್ಣನ ಪುತ್ಥಳಿಯು (Sangolli Rayanna Statue) ಫೈಬರ್‌ನಿಂದ ತಯಾರಿಸಲಾಗಿದ್ದು, ಇದನ್ನು ತೆರವುಗೊಳಿಸಿ ನೂತನ ಕಂಚಿನ ಪುತ್ಥಳಿಯನ್ನು ನಿರ್ಮಿಸಿ ಸ್ಥಾಪಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ಹೇಳಿದರು.

ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಎದುರು ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಸಮುದಾಯದ ಮುಖಂಡರು ಹಾಗೂ ವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣ ಹೋರಾಟ ಸಮಿತಿಯ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ NIAಗೆ ಇಲ್ಲ – ಸಿಎಂ ಪರೋಕ್ಷ ಹೇಳಿಕೆ

 

ಈ ಹಿಂದೆ ರಾಯಣ್ಣನ ಪ್ರತಿಮೆ ಸ್ಥಾಪನೆ ವೇಳೆ ಸರ್ಕಾರ ಹಾಗೂ ಕಾನೂನಾತ್ಮಕ ಅನುಮತಿಗಳನ್ನು ಪಡೆಯಲಾಗಿರಲಿಲ್ಲ, ಹೀಗಾಗಿ ಪುತ್ಥಳಿಯ ಅನಾವರಣ ಕಾರ್ಯ ನೆನೆಗುದಿಗೆ ಬಿದ್ದಿತ್ತು, ಸಮುದಾಯದ ಮುಖಂಡರ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಗಮನಕ್ಕೆ ತಂದು, ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಅನುಮತಿ ದೊರಕಿಸಿ ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ:  ಖಾಸಗಿ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯಿಂದ ಬಿಮ್ಸ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ!

ಪುತ್ಥಳಿಯ ಸ್ಥಾಪನೆ ವಿಚಾರದಲ್ಲಿ ನನ್ನೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವ ಬಿ.ನಾಗೇಂದ್ರ ಅವರು ಕೂಡ ಸರ್ಕಾರದ ಮೇಲೆ ಒತ್ತಡ ತಂದು ಈ ಕಾರ್ಯವನ್ನು ಸಾಧ್ಯವಾಗಿಸಿದ್ದಾರೆ. ಸಮುದಾಯದ ಪರ ಅವರಿಗೂ ಧನ್ಯವಾದ ಸಲ್ಲಿಸುವೆ. ಈಗಿರುವ ಪುತ್ಥಳಿಯು ಫೈಬರ್ ನಿಂದ ತಯಾರಿಸಲಾಗಿದ್ದು, ಈ ಪುತ್ಥಳಿಯನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ರಾಯಣ್ಣನ ನೂತನ ಕಂಚಿನ ಪ್ರತಿಮೆಯನ್ನು ನಿರ್ಮಿಸಿ, ಇದೇ ಜಾಗದಲ್ಲಿ ಸ್ಥಾಪಿಸಿ, ಅನಾವರಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ, ಮಾಜಿ ಮೇಯರ್ ಎಂ.ರಾಜೇಶ್ವರಿ, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜಗೌಡ, ಹೋರಾಟ ಸಮಿತಿಯ ಇಟ್ಟಂಗಿ ಭಟ್ಟಿ ಯರಿಸ್ವಾಮಿ, ಕೆ.ಮೋಹನ್, ಸುಬ್ಬರಾಯುಡು, ಬೆಣಕಲ್ ಮಂಜುನಾಥ, ಕೆ.ಯಶೋಧಾ, ಕೊಳಗಲ್ ಅಂಜಿನಿ, ಸುರೇಂದ್ರಗೌಡ, ಕವಿತಾ ಸೇರಿದಂತೆ ಹಲವರು ಇದ್ದರು.

Share This Article