ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಜೈಲಿನಿಂದ ರಿಲೀಸ್ ಆದ ಬಳಿಕವೂ ವಿದೇಶಕ್ಕೆ ತೆರಳದಂತೆ ಕೋರ್ಟ್ ನಟ ದರ್ಶನ್ಗೆ (Darshan) ಷರತ್ತು ವಿಧಿಸಿತ್ತು. ಪಾಸ್ ಪೋರ್ಟ್ ಕೂಡ ಮುಟ್ಟುಗೋಲು ಹಾಕಿಕೊಂಡಿತ್ತು. ಜಾಮೀನು ಸಿಕ್ಕು ಜೈಲಿನಿಂದ ಬಂದ ನಂತರ, ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳು ಅನುಮತಿ ಕೇಳಿದ್ದರು ನಟ ದರ್ಶನ್. ಅವರಿಗೆ ಈಗ ಅನುಮತಿ ಸಿಕ್ಕಿದೆ. ಹಾಗಾಗಿ ಸದ್ಯದಲ್ಲೇ ವಿದೇಶ ವಿಮಾನ ಏರಲು ಸಜ್ಜಾಗಿದ್ದಾರೆ ದರ್ಶನ್.
ದರ್ಶನ್ ನಟನೆಯ ಡೆವಿಲ್ (The Devil) ಸಿನಿಮಾದ ಚಿತ್ರೀಕರಣ ಸದ್ಯ ಬೆಂಗಳೂರಿನಲ್ಲಿ (Bengaluru) ನಡೆಯುತ್ತಿದೆ. ಸಾಹಸ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಈ ವಾರದಲ್ಲಿ ಬಹುತೇಕ ಸಾಹಸ ಸನ್ನಿವೇಶಗಳ ಶೂಟಿಂಗ್ ಮುಗಿಯಲಿದೆಯಂತೆ. ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಇಡೀ ಟೀಮ್ ವಿದೇಶಕ್ಕೆ ಹಾರಲಿದೆ. ವಿದೇಶದಲ್ಲಿ ಹಾಡಿನ ಶೂಟಿಂಗ್ ಗೆ ಪ್ಲ್ಯಾನ್ ಮಾಡಿದ್ದಾರಂತೆ ನಿರ್ದೇಶಕ ಪ್ರಕಾಶ್.
ಜುಲೈ 1 ರಿಂದ ಜುಲೈ 28ರ ವರೆಗೂ ದರ್ಶನ್ ಅವರಿಗೆ ಕೋರ್ಟ್ ನಿಂದ ವಿದೇಶಕ್ಕೆ ಹೋಗಲು ಅನುಮತಿ ಸಿಕ್ಕಿದೆ. ಹಾಗಾಗಿ ಜುಲೈ ಮೊದಲ ವಾರದಲ್ಲೇ ಅವರು ವಿದೇಶಕ್ಕೆ ಹಾರಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಡಿನ ಚಿತ್ರೀಕರಣಕ್ಕೆ ಪ್ಲ್ಯಾನ್ ಆಗಿದ್ದು, ಟಿಕೆಟ್ ಕೂಡ ಬುಕ್ ಆಗಿದೆ ಅಂತಾರೆ ಸಿನಿಮಾ ಟೀಮ್ನ ಸದಸ್ಯರು.