ಕೋಲ್ಕತ್ತಾ ಗ್ಯಾಂಗ್‌ ರೇಪ್‌ | ಕಾಲಿಗೆ ಬಿದ್ದರೂ ನನ್ನನ್ನು ಬಿಡಲಿಲ್ಲ – ಸಂತ್ರಸ್ತೆ ದೂರಿನಲ್ಲಿ ಉಲ್ಲೇಖ

Public TV
2 Min Read

ಕೋಲ್ಕತ್ತಾ: ನಾನು ಅವನ ಕಾಲಿಗೆ ಬಿದ್ದರೂ ನನ್ನನ್ನು ಬಿಡದೇ ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಕೋಲ್ಕತ್ತಾದಲ್ಲಿ (Kolkata) ಸಾಮೂಹಿಕ ಅತ್ಯಾಚಾರಕ್ಕೊಳಗಾದ 24 ವರ್ಷದ ಕಾನೂನು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಮುಖ ಆರೋಪಿಯ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಕೋಲ್ಕತ್ತಾ ಕಾನೂನು ಕಾಲೇಜಿನೊಳಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರ ಮುಂದೆ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾಳೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್‌; ಟಿಎಂಸಿ ನಾಯಕ ಸೇರಿ ಮೂವರ ಬಂಧನ

ಕಸ್ಬಾ ಪ್ರದೇಶದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ (Gangrape) ನಡೆದಿತ್ತು. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತ ಮೂವರಲ್ಲಿ ಇಬ್ಬರು ವಿದ್ಯಾರ್ಥಿಗಳು, ಮತ್ತೊಬ್ಬ ಮಾಜಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಬುಧವಾರ ಸಂಜೆ ಕಾಲೇಜು ಆವರಣದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಯುವತಿ ಆರೋಪಿಸಿ ದೂರು ನೀಡಿದ್ದರು. ದೂರಿನನ್ವಯ ಕಸ್ಬಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಪ್ರಕರಣದಲ್ಲಿ 31 ವರ್ಷದ ಮೊನೊಜಿತ್ ಮಿಶ್ರಾ (ಕಾಲೇಜಿನ ಮಾಜಿ ಘಟಕದ ಅಧ್ಯಕ್ಷ, ಹಾಲಿ ಟಿಎಂಸಿ ನಾಯಕ), 19 ವರ್ಷದ ಜೈಬ್ ಅಹ್ಮದ್ ಮತ್ತು 20 ವರ್ಷದ ಪ್ರಮಿತ್ ಮುಖೋಪಾಧ್ಯಾಯನನ್ನು ಬಂಧಿಸಲಾಗಿದೆ.

ಜೂನ್ 26 ರ ಸಂಜೆ ಕೋಲ್ಕತ್ತಾದ ತಲ್ಬಗನ್ ಕ್ರಾಸಿಂಗ್ ಬಳಿಯ ಸಿದ್ಧಾರ್ಥ ಶಂಕರ್ ಶಿಶು ರಾಯ್ ಉದ್ಯಾನ್ ಎದುರುಗಡೆಯಿಂದ ಮೊನೊಜಿತ್ ಮತ್ತು ಅಹ್ಮದ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಬಂಧನದ ಸಮಯದಲ್ಲಿ ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜೂನ್ 27 ರಂದು ಬೆಳಗ್ಗೆ 12:30 ಕ್ಕೆ ಮೂರನೇ ಆರೋಪಿ ಪ್ರಮಿತ್‌ನನ್ನು ಆತನ ಮನೆಯಿಂದ ಬಂಧಿಸಲಾಯಿತು. ಆತನ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸದ್ಯ ನ್ಯಾಯಾಲಯವು ಜುಲೈ 1 ರ ಮಂಗಳವಾರದವರೆಗೆ ಪೊಲೀಸ್ ಕಸ್ಟಡಿ ನೀಡಿದೆ.

ಜೂನ್ 25 ರ ಸಂಜೆ ವಿದ್ಯಾರ್ಥಿನಿ ಕಾಲೇಜಿಗೆ ಹೋಗಿದ್ದಾಗ ಮೂವರು ಆರೋಪಿಗಳು ಆಕೆಯನ್ನು ಸಂಸ್ಥೆಯೊಳಗಿನ ಕೋಣೆಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿ ಕಸ್ಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣವು ಪ್ರಸ್ತುತ ಪ್ರಾಥಮಿಕ ಹಂತದಲ್ಲಿದೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 25ರ ಅಳಿಯನ ಜೊತೆ 55ರ ಅತ್ತೆ ಪರಾರಿ – ಮತ್ತೆ ವಾಪಸ್ ಬಂದು ಗಂಡ, ಮಗಳ ಜೊತೆ ಕಿರಿಕ್!

Share This Article