– ಬಹಿರಂಗ ಹೇಳಿಕೆ ನೀಡದಂತೆ ರಾಜು ಕಾಗೆಗೆ, ಬಾಲಕೃಷ್ಣಗೆ ವಾರ್ನಿಂಗ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಅಸಮಾಧಾನಿತ ಶಾಸಕ ರಾಜು ಕಾಗೆ ಹಾಗೂ ಭ್ರಷ್ಟಾಚಾರ ಬಾಂಬ್ ಸಿಡಿಸಿದ ಶಾಸಕ ಬಿ.ಆರ್ ಪಾಟೀಲ್ ಅವರನ್ನ ಭೇಟಿಯಾಗಿದ್ದಾರೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಸಿಎಂ ಬಿ.ಆರ್ ಪಾಟೀಲ್ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ʻನೀನು ಪದೇ ಪದೇ ಈ ರೀತಿ ಮಾತನಾಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದೀಯಾ, ಇದು ಸರಿಯಲ್ಲ. ಇದೇ ವೇಳೆ ಆಡಿಯೋ ಬಗ್ಗೆ ಸಮಾಜಾಯಿಷಿ ಕೊಡಲು ಮುಂದಾಗಿದ್ದ ಬಿಆರ್ ಪಾಟೀಲ್ಗೆ ಆಡಿಯೋ ಬಹಿರಂಗ ಪಡಿಸಿದ್ದು ಯಾರು..? ನೀನಲ್ವಾ ಎಂದು ಸಿಎಂ ಗರಂ ಆಗಿದ್ದರು. ನೀನು ಆಡುವ ಮಾತು ಈ ಬೆಳವಣಿಗೆ ಸರ್ಕಾರ ಹಾಗೂ ಪಕ್ಷ ಎರಡಕ್ಕೂ ಡ್ಯಾಮೇಜ್ ಮಾಡಿದೆ. ನನಗೆ ವೈಯುಕ್ತಿಕವಾಗಿ ಪದೇ ಪದೇ ಮುಜುಗರ ಆಗುವಂತೆ ಮಡುತ್ತಿದ್ದೀಯಾ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಇನ್ನೂ ಶಾಸಕರಾದ ರಾಜು ಕಾಗೆ ಹಾಗೂ ಮಾಗಡಿ ಬಾಲಕೃಷ್ಣ ಇಬ್ಬರಿಗೂ ಬಹಿರಂಗವಾಗಿ ಹೇಳಿಕೆ ನೀಡದಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ. ನಿಮ್ಮ ಅಭಿಪ್ರಾಯ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ನಾಲ್ಕು ಗೋಡೆಯ ಮಧ್ಯೆ ಇರಲಿ. ಯಾವುದೇ ಹಿರಂಗ ಹೇಳಿಕೆ ಬೇಡ. ಹೈಕಮಾಂಡ್ ಈ ಬೆಳವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ನಿಮ್ಮ ಮಾತು ನಡೆನುಡಿಯಿಂದ ಸಮಸ್ಯೆ ಮಾಡಿಕೊಳ್ಳಬೇಡಿ, ಏನೇ ಇದ್ದರು ನನ್ನನ್ನು ನೇರವಾಗಿ ಭೇಟಿ ಮಾಡಿ ಎಂದು ಸಿಎಂ ತಾಕೀತು ಮಾಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.