– ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ರಾ ಶಾಸಕರು?
– ವಸತಿ ನಿಗಮದಲ್ಲಿ ಭಾರೀ ಅಕ್ರಮ ಆರೋಪ
ಕಲಬುರಗಿ: ರಾಜ್ಯ ಸರ್ಕಾರದ ಬುಡಕ್ಕೆ ಈಗ ಮತ್ತೊಂದು ಭ್ರಷ್ಟಾಚಾರ ಬಾಂಬ್ ಬಿದ್ದಿದೆ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ (Rajeev Gandhi Housing Corporation) ಹಣ ನೀಡಿದವರಿಗಷ್ಟೇ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್ ಪಾಟೀಲ್ (BR Patil) ತಮ್ಮದೇ ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾದ ಆಡಿಯೊವೊಂದು ವೈರಲ್ ಆಗಿದೆ.
ಏನಿದು ವೈರಲ್ ಆಡಿಯೋ ಬಾಂಬ್?
ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed Khan) ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರ ಮೊಬೈಲ್ಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿರುವ ಪಾಟೀಲ್ ಅವರು, ಹಣ ಪಡೆದು ಯಾವ ಗ್ರಾಮಕ್ಕೆ ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ? ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಮಾಹಿತಿಯನ್ನ ನಾನು ಬಹಿರಂಗಪಡಿಸಿದ್ರೆ ಸರ್ಕಾರವೇ ಅಲುಗಾಡುತ್ತೆ ಎಂದೂ ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಬಿ.ಆರ್ ಪಾಟೀಲ್ ಅವರು ಸರ್ಫರಾಜ್ ಖಾನ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಮೊಬೈಲ್ ಕರೆಯ ಆಡಿಯೋ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಇದನ್ನೂ ಓದಿ: ಮಂಗಳೂರು | ಕಾರು ಅಪಘಾತದಲ್ಲಿ `ಕೈ’ ಮುಖಂಡ ಸೇರಿ ಇಬ್ಬರು ದುರ್ಮರಣ
ಆಡಿಯೋ ಸಂಭಾಷಣೆಯಲ್ಲೇನಿದೆ?
ಸಚಿವ ಜಮೀರ್ ಅವರ ಆಪ್ತ ಕಾರ್ಯದರ್ಶಿಗೆ ಕರೆ ಮಾಡುವ ಬಿ.ಆರ್ ಪಾಟೀಲ್, ‘ಹಣ ನೀಡಿದವರಿಗಷ್ಟೇ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ನಮ್ಮ ಸರ್ಕಾರವನ್ನೇ ದೂರಲು ಬೇಸರವಾಗುತ್ತಿದೆ’ ಎಂದು ಆರಂಭದಲ್ಲೇ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಅದಕ್ಕೆ ಸರ್ಫರಾಜ್ ಖಾನ್ ಅವರು, ‘ಯಾವ ಕ್ಷೇತ್ರದಲ್ಲಿ ಹೀಗೆ ಆಗಿದೆ ಮಾಹಿತಿ ಕೊಡಿ. ಕೂಡಲೇ ಅವರನ್ನು ಜೈಲಿಗೆ ಕಳುಹಿಸುತ್ತೇವೆ’ ಎನ್ನುತ್ತಾರೆ. ಇದನ್ನೂ ಓದಿ: ಟ್ರ್ಯಾಕ್ಟರ್ ಕದ್ದು ಜೈಲು ಸೇರಿದ್ರು, ರಿಲೀಸ್ ಆಗಿ ಕಾರು ಕಳ್ಳತನಕ್ಕಿಳಿದ್ರು – ಮತ್ತೆ ಪೊಲೀಸರ ಅತಿಥಿಗಳಾದ ಕಳ್ರು!
ಇದಕ್ಕೆ ವ್ಯಂಗ್ಯವಾಗಿ ನಗುವ ಬಿ.ಆರ್ ಪಾಟೀಲ್, ‘ಆಳಂದ ಮತಕ್ಷೇತ್ರದ ಮುನ್ನಳ್ಳಿಯಲ್ಲಿ 200 ಮನೆ, ದರ್ಗಾ ಶಿರೂರದಲ್ಲಿ 100, ಧಂಗಾಪುರದಲ್ಲಿ 200, ಕವಲಗಾದಲ್ಲಿ 200, ಮಾಡಿಯಾಳದಲ್ಲಿ 200 ಮನೆಗಳು ಸೇರಿದಂತೆ ಒಟ್ಟು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ. ಪಕ್ಕದ ಅಫಜಲಪುರ ಕ್ಷೇತ್ರದಲ್ಲಿಯೂ ಹಣ ಪಡೆದೇ ಮನೆಗಳನ್ನು ಹಂಚಿಕೆ ಮಾಡಲಾಗಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
‘ನಾನು ಕೊಟ್ಟ ಶಿಫಾರಸು ಪತ್ರಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಬದಲಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ನೀಡಿದ ಪಟ್ಟಿಗೆ ಅನುಮೋದನೆ ನೀಡಿದ್ದೀರಿ. ಶಾಸಕ ನೀಡಿದ ಪತ್ರಕ್ಕೆ ಬೆಲೆಯೇ ಇಲ್ಲವೇ?’ ಎಂದೂ ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಮಹಿಳೆ ಸಾವು – ಮಣಿಪುರ ಮತ್ತೆ ಉದ್ವಿಗ್ನ
ಶಾಸಕರನ್ನು ಸಮಾಧಾನ ಮಾಡಲು ಯತ್ನಿಸಿದ ಸರ್ಫರಾಜ್ ಅವರು, ‘ನೀವು ಯಾರ ಹೆಸರುಗಳನ್ನು ಶಿಫಾರಸು ಮಾಡಿದ್ದೀರೋ ಅವರ ಪಟ್ಟಿ ಕೊಡಿ ಸರ್. ಅವರಿಗೆ ಮಂಜೂರು ಮಾಡುತ್ತೇವೆ. ಹಣ ಪಡೆದು ಹಂಚಿಕೆ ಮಾಡಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡುತ್ತಾರೆ.
ಸದ್ಯ ಈ ಆಡಿಯೋ ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ವಿಪಕ್ಷಗಳ ಹೋರಾಟಕ್ಕೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಇದನ್ನೂ ಓದಿ: ರಾಜಕೀಯ ಮಾತಾಡ್ಬಾರದು ಅಂತ ಯಾವಾಗಿನಿಂದ ಜಾರಿಯಾಗಿದೆ? – ನೋಟಿಸ್ಗೆ ಚಕ್ರವರ್ತಿ ಸೂಲಿಬೆಲೆ ಕಿಡಿ