ಕಲಬುರಗಿ: ವೈದ್ಯರಾಗಬೇಕೆಂಬ ಭವ್ಯ ಭವಿಷ್ಯದ ಕನಸು ಹೊತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೋಸದ ಜಾಲಕ್ಕೆ ಬೀಳಬಾರದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ (Sharanprakash Patil) ಕರೆ ನೀಡಿದ್ದಾರೆ.
ಈ ಬಗ್ಗೆ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಅತ್ಯುತ್ತಮವಾಗಿ ಓದಿ, ಪರೀಕ್ಷೆ ಬರೆದಿರುವ ಆಕಾಂಕ್ಷಿಗಳು, ಸೀಟು ಪಡೆಯಲೇಬೇಕು ಎಂಬ ಆತಂಕದಿಂದ ಮೋಸದ ಜಾಲಕ್ಕೆ ಬೀಳಬಾರದು. ವೈದ್ಯಕೀಯ ಸೀಟು ಕೊಡಿಸುತ್ತೇವೆ. ಆ ಕಾಲೇಜಿನಲ್ಲಿ ಸೀಟು ಸಿಗುತ್ತೆ ನಿಮಗೆ, ನಮಗೆ ಅವರು ಗೊತ್ತಿದ್ದಾರೆ. ಇವರು ಗೊತ್ತಿದ್ದಾರೆ ಎಂದು ಹೇಳಿ ಸೀಟು ಕೊಡಿಸುವ ಭರವಸೆ ನೀಡಿ ಮರಳು ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಲತ್ತಗಿರಿ | ಪ್ರವಾಸಿಗರ ಕಾರಿನ ಮೇಲೆ ಬಿದ್ದ ಬೃಹತ್ ಮರ – ತಪ್ಪಿದ ಅನಾಹುತ
ನೀಟ್ ಫಲಿತಾಂಶಗಳು ಈಗಾಗಲೇ ಪ್ರಕಟವಾಗಿವೆ. ಕರ್ನಾಟಕದಲ್ಲಿ 1,47,782 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 1,42,369 ವಿದ್ಯಾರ್ಥಿಗಳು ಹಾಜರಾಗಿದ್ದರು, ಈ ಪೈಕಿ 83,582 ಅರ್ಹತೆ ಪಡೆದುಕೊಂಡಿದ್ದಾರೆ. ಹೇಗಾದರೂ ಮಾಡಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಪಡೆಯಬೇಕು ಎಂಬ ಆತುರಕ್ಕೆ ಬರಬೇಡಿ. ನಿಮ್ಮ ಆತಂಕವನ್ನು ದುರುಪಯೋಗಪಡಿಸಿಕೊಳ್ಳಲು ಮಧ್ಯವರ್ತಿಗಳು ಕಾದಿರುತ್ತಾರೆ. ಅವರ ಮೋಸದ ಜಾಲಕ್ಕೆ ಬೀಳಬೇಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಅಧ್ಯಯನ ಪ್ರವಾಸ: ಮಲೇಶಿಯಾದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್
ಕೆಇಎಯಿಂದ ಸೀಟು ಹಂಚಿಕೆ
ನಮ್ಮ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದಲೇ ಸೀಟುಗಳ ಹಂಚಿಕೆ ಕ್ರಮಬದ್ಧವಾಗಿ ಆಗುತ್ತದೆ. ಅದರಂತೆ ನಿಯಮಗಳನ್ನು ಪಾಲಿಸಿ. ವಿದ್ಯಾರ್ಥಿಗಳು ಮತ್ತು ಪೋಷಕರು ಇದನ್ನು ತಪ್ಪದೇ ತಿಳಿದುಕೊಳ್ಳಬೇಕು. ಅತ್ಯುತ್ತಮ ಸಾಧನೆ ಮಾಡಿ, ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ವಿದ್ಯಾರ್ಥಿಗಳ ಭವಿಷ್ಯವೂ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಬ್ರೇಕ್ – ಒಂದೇ ದಿನದಲ್ಲಿ 103 ವಾಹನಗಳು ಸೀಜ್
ದಲ್ಲಾಳಿಗಳಿಗೆ ಎಚ್ಚರಿಕೆ
ಸೀಟು ಕೊಡಿಸುತ್ತೇನೆಂದು ವಿದ್ಯಾರ್ಥಿಗಳು ಅಥವಾ ಪೋಷಕರ ದಿಕ್ಕು ತಪ್ಪಿಸಿ ಮೋಸ ಮಾಡಿದವರು ಕಂಡುಬಂದರೆ, ಅಂತಹ ದಲ್ಲಾಳಿಗಳನ್ನು ಪತ್ತೆ ಹಚ್ಚಿ, ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜಾರಿಗೊಳಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ಸಹಿಸುವುದಿಲ್ಲ. ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.