ಅವಳ ಮಾತು ಕೇಳಿದ್ದಕ್ಕೆ ಜೀವ ಉಳಿಯಿತು.. ಥ್ಯಾಂಕ್ಸ್ ಹೆಂಡ್ತಿ: ಪತನವಾದ ಫ್ಲೈಟ್‌ನಲ್ಲೇ ಹೋಗ್ಬೇಕಿದ್ದ ವೈದ್ಯ ಪಾರು

Public TV
2 Min Read

– ಜೂ.2 ರಂದು ಟಿಕೆಟ್ ಕ್ಯಾನ್ಸಲ್ ಮಾಡಿ ಜೂ.12ರಂದು ಬುಕ್ ಮಾಡಿದ್ದ ಪತಿ

ಗಾಂಧೀನಗರ: ಆ ದಿನ ಪತನವಾಗಬೇಕಿದ್ದ ಏರ್ ಇಂಡಿಯಾ (Air India) ಫ್ಲೈಟ್‌ನಲ್ಲಿ ನಾನೂ ಪ್ರಯಾಣಿಸಬೇಕಿತ್ತು. ಆದ್ರೆ ಜ್ವರ ಬಂದಿದ್ದಕ್ಕೆ ನನ್ನ ಹೆಂಡ್ತಿ ಲಂಡನ್‌ಗೆ ಹೋಗೋದು ಬೇಡ ಅಂತ ಹೇಳಿದಳು, ಅದಕ್ಕೆ ಹೋಗ್ಲಿಲ್ಲ. ಹೆಂಡ್ತಿ ಮಾತು ಕೇಳಿದ್ದಕ್ಕೆ ಜೀವ ಉಳಿದಿದೆ. ನನ್ನ ಹೆಂಡ್ತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು… ಇದು ಅಹಮದಾಬಾದ್ ಏರ್ ಇಂಡಿಯಾ (Ahmedabad Plane Crash) ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ವೈದ್ಯ ಡಾ.ಉಮಾಂಗ್ ಪಟೇಲ್ ಅವರ ಮಾತು.

ಹೆಂಡತಿಗೆ ಧನ್ಯವಾದ ತಿಳಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಆ ದಿನ ನನ್ನ ಹೆಂಡತಿ ಬೇಡ ಎಂದಿರಲಿಲ್ಲವೆಂದರೆ ಇಂದು ನಾನು ಇಲ್ಲಿ ಇರುತ್ತಿರಲಿಲ್ಲ. ನಿಜಕ್ಕೂ ಆಕೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಕಳೆದ ಐದು ವರ್ಷಗಳಿಂದ ನಾವು ಬ್ರಿಟನ್ ನಾರ್ಥಾಂಪ್ಟನ್‌ನಲ್ಲಿ ವಾಸಿಸುತ್ತಿದ್ದೇವೆ. ಮೇ 24ರಂದು ನಾನು, ನನ್ನ ಪತ್ನಿ, ಮಕ್ಕಳು ಹಾಗೂ ಅಜ್ಜಿ ಸೇರಿಕೊಂಡು ಲಂಡನ್‌ನಿಂದ ಅಹಮದಾಬಾದ್‌ಗೆ ಬಂದಿಳಿದೆವು. ಅವತ್ತು ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಎಸಿ ಹಾಗೂ ಮಲ್ಟಿಮೀಡಿಯಾ ಪ್ಲೇಯರ್‌ನ ಬಟನ್‌ಗಳು ವರ್ಕ್ ಆಗುತ್ತಿರಲಿಲ್ಲ ಎಂದರು.ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ – 2ನೇ ಬ್ಲ್ಯಾಕ್ ಬಾಕ್ಸ್ ಪತ್ತೆ

ಅಂದು ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಕೊಯ್ಡಮ್ ಗ್ರಾಮಕ್ಕೆ ಹೋದೆವು. ಜೂ.2ರಂದು ಬ್ರಿಟನ್‌ಗೆ ಮರಳಬೇಕಿತ್ತು. ಆದರೆ ನನ್ನ ತಂದೆಗೆ ಪಾರ್ಶ್ವವಾಯು ಆದ ಕಾರಣ ಆ ಟಿಕೆಟ್‌ನ್ನು ಕ್ಯಾನ್ಸಲ್ ಮಾಡಿ. ಜೂ.12ಕ್ಕೆ ಒಬ್ಬನೇ ತೆರಳುವ ಪ್ಲ್ಯಾನ್‌ ಮಾಡಿಕೊಂಡಿದ್ದೆ. ಹೀಗಾಗಿ ಜೂ.09 ರಂದು ನನ್ನ ಹೆಂಡತಿಯನ್ನು ಆಕೆಯ ಅಮ್ಮನ ಮನೆಗೆ ಬಿಟ್ಟು ಬರಲು ಹೋಗಿದ್ದೆ. ಆದರೆ ಆ ದಿನ ಮನೆಗೆ ಮರಳುವಷ್ಟರಲ್ಲಿ ನನಗೆ ತುಂಬಾ ಜ್ವರ ಬಂದಿತ್ತು. ಮಾರನೇ ದಿನ ಬೆಳಿಗ್ಗೆ ನನಗೆ ಎದ್ದು ನಿಲ್ಲೋಕೂ ಆಗುತ್ತಿರಲಿಲ್ಲ. ಹೀಗಾಗಿ ನನ್ನ ಹೆಂಡತಿ ಜ್ವರ ಜಾಸ್ತಿಯಿದೆ. ಹೋಗಬೇಡಿ, ಸ್ವಲ್ಪ ದಿನ ಇಲ್ಲೇ ಇರಿ. ಜ್ವರ ಕಡಿಮೆಯಾದ ಬಳಿಕ ಹೋಗಿ ಎಂದಳು. ನನಗೂ ಆಕೆಯ ಮಾತು ಸರಿಯೆನಿಸಿತು. ಹೀಗಾಗಿ ಟಿಕೆಟ್ ಕ್ಯಾನ್ಸಲ್ ಮಾಡಿ, ಜೂ.15ಕ್ಕೆ ಮತ್ತೆ ಬುಕ್ ಮಾಡಿದೆ ಎಂದು ಹೇಳಿದರು.

ಜೂ.12ರಂದು ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ ಕೇಳಿ ನಿಜಕ್ಕೂ ಗಾಬರಿಯಾಯಿತು. ಒಂದು ವೇಳೆ ನಾನು ಅವತ್ತೇ ಹೋಗಿದ್ದರೆ ಇವತ್ತು ಇಲ್ಲಿರುತ್ತಿರಲಿಲ್ಲ. ನನ್ನ ಹೆಂಡತಿಗೆ ಎಷ್ಟೇ ಥ್ಯಾಂಕ್ಸ್ ಹೇಳಿದರೂ ಕಡಿಮೆ ಎನಿಸುತ್ತಿದೆ. ದೇವರು ನಿಜಕ್ಕೂ ನನ್ನನ್ನು ಕಾಪಾಡಿದ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪಾರ್ಥಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಏನಿದು ಘಟನೆ?
ಜೂನ್ 12ರಂದು ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಪರಿಣಾಮ ವಿಮಾನ ನಿಲ್ದಾಣದ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿತ್ತು. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್, ಒಬ್ಬ ಕೆನಡಾ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳು 12 ಸಿಬ್ಬಂದಿ ಇದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ್ಯ ಪಾರಾಗಿದ್ದಾರೆ.ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ – 80 ಜನರ ಡಿಎನ್‌ಎ ಮ್ಯಾಚ್, 33 ಮೃತದೇಹಗಳ ಹಸ್ತಾಂತರ

Share This Article