ಕೊಡಗು: ಭೂಮಿ ಮತ್ತು ವಸತಿಗೆ ಆಗ್ರಹಿಸಿ ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿ ನಡೆಯುತ್ತಿರೋ ಹೋರಾಟ ತೀವ್ರಗೊಂಡಿದ್ದು, ಇಂದು ಆದಿವಾಸಿ ಮಹಿಳಾ ಮುಖಂಡರೊಬ್ಬರು ಮರವೇರಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಮುತ್ತಮ್ಮ ಎಂಬವರೇ ಮರವೇರಿ ಪ್ರತಿಭಟನೆ ನಡೆಸಿದ ಮಹಿಳೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಹಾಗೂ ಉಪವಿಭಾಗಾಧಿಕಾರಿ ಪ್ರತಿಭಟನಾನಿರತ ದಿಡ್ಡಳ್ಳಿ ಆದಿವಾಸಿ ಜನರೊಂದಿಗೆ ಮಾತುಕತೆ ನಡೆಸಿದರು. ಕೊನೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಮುತ್ತಮ್ಮ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದಾಗ ಮರದಿಂದ ಕೆಳಗಿಳಿದರು.
ಹಿಂದೆ ನಡೆದ ಸಭೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರು ಸರ್ಕಾರ ನಿಗದಿ ಮಾಡಿದ್ದ ಸ್ಥಳಕ್ಕೆ ತೆರಳಲು ಒಪ್ಪಿದ್ದು, ಈಗ ಪುನಃ ಪ್ರತಿಭಟನೆ ನಡೆಸುತ್ತಿರುವುದು ಸಂಶಯ ಮೂಡಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಹೇಳಿದರು.