ಉತ್ತರಾಖಂಡ | ಭಾರೀ ಮಳೆಗೆ ಭೂಕುಸಿತ – ಹೆದ್ದಾರಿಯಲ್ಲಿ 6 ಕಿ.ಮೀ ಟ್ರಾಫಿಕ್‌

Public TV
1 Min Read

ಡೆಹ್ರಾಡೋನ್‌: ಉತ್ತರಾಖಂಡದಲ್ಲಿ (Uttarakhand) ಭಾರೀ ಮಳೆಯಿಂದ (Rain) ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 6 ಕಿ.ಮೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ಭೂಕುಸಿತ (Lindslide) ಮತ್ತು ಭಾರೀ ಮಳೆಯಿಂದಾಗಿ ಅಲಕನಂದಾ ನದಿಯ ದಡದಲ್ಲಿರುವ ಧಾರಿ ದೇವಿ ದೇವಸ್ಥಾನದಿಂದ ಆರು ಕಿ.ಮೀ. ದೂರದಲ್ಲಿರುವ ಖಾಂಕ್ರದವರೆಗೆ ಸಾಗುವ ಬದರಿನಾಥ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಸಂಜೆ 4 ಗಂಟೆಯ ಸುಮಾರಿಗೆ Google ಟ್ರಾಫಿಕ್ ಅಪ್‌ಡೇಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 7 (NH 7) ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ದಟ್ಟಣೆ ಇರುವುದನ್ನು ತೋರಿಸಿದೆ. ಈ ಹೆದ್ದಾರಿ ಯಾತ್ರಾ ಸ್ಥಳಗಳಾದ ಋಷಿಕೇಶ, ದೇವಪ್ರಯಾಗ, ರುದ್ರಪ್ರಯಾಗ, ಕರ್ಣಪ್ರಯಾಗ, ಚಮೋಲಿ, ಜೋಶಿಮಠ ಮತ್ತು ಬದರಿನಾಥವನ್ನು ಸಂಪರ್ಕಿಸುತ್ತದೆ.

ಕಾರುಗಳು, ಫೋರ್ಸ್ ಟ್ರಾವೆಲರ್‌ಗಳು, ಟ್ರಕ್‌ಗಳು ಸಾಲುಗಟ್ಟಿ ನಿಂತಿದ್ದು, ನಿಧಾನಗತಿಯಲ್ಲಿ ಸಾಗುತ್ತಿವೆ. ಕೆಲವೆಡೆ ಭೂಕುಸಿತ ಸಂಭವಿಸಿದ ಜಾಗಗಳಲ್ಲಿ ಜೆಸಿಬಿಗಳ ಮೂಲಕ ತೆರವುಗೊಳಿಸುವ ಕೆಲಸ ನಡೆಯುತ್ತಿದೆ.

ಇದರ ನಡುವೆ ಹವಾಮಾನ ಇಲಾಖೆ ಮೇ 27 ರವರೆಗೆ ಪಶ್ಚಿಮ ಮತ್ತು ಪೂರ್ವ ರಾಜಸ್ಥಾನದಲ್ಲಿ ಬಿರುಗಾಳಿ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ನೀಡಿದ್ದಾರೆ.

Share This Article