ರಾಜ್ಯದಲ್ಲಿ ಪೂರ್ವ ಮುಂಗಾರು ಆರ್ಭಟ – ಇನ್ನೂ 4 ದಿನ ಮಳೆ, ಬಳಿಕ ಉಷ್ಣಾಂಶದಲ್ಲಿ ಹೆಚ್ಚಳ ಸಾಧ್ಯತೆ

Public TV
2 Min Read

ಬೆಂಗಳೂರು: ಅಬ್ಬರದ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಗುರುವಾರ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಕೆಲವುಕಡೆ ವರುಣದೇವ ತಂಪೆರೆದಿದ್ದಾನೆ. ಪೂರ್ವ ಮುಂಗಾರಿನ ಆರ್ಭಟ ಶುರುವಾಗಿದ್ದು, ಇನ್ನೂ 4 ದಿನ ಮಳೆಯಾಗಲಿದೆ. ಬಳಿಕ ಉಷ್ಣಾಂಶದಲ್ಲಿ (Temperature) ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.

ಬೇಸಿಗೆ ಆರಂಭವಾಗಿದ್ದು, ರಣರಣ ಬಿಸಿಲಿಗೆ ಜನರು ತತ್ತರಿಸಿದ್ದರು. ಇದರ ನಡುವೆ ಗುರುವಾರ ಬೆಂಗಳೂರಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಜೊತೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಕೆಲವೆಡೆ ಭಾರೀ ಮಳೆಯಾದರೆ, ಇನ್ನೂ ಕೆಲವಡೆ ಸಾಧಾರಣ ಮಳೆಯಾಗಿದೆ. ಇದು ಚಂಡಮಾರುತ ಅಲ್ಲ, ಆಗ್ನೇಯ ದಿಕ್ಕಿನಿಂದ ಬಲವಾದ ಗಾಳಿ ಬೀಸುತ್ತಿರುವುದು ಮಳೆಗೆ ಕಾರಣವಾಗಿದೆ. ಬಿರುಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇದ್ದು, ಇದನ್ನು ಪೂರ್ವ ಮುಂಗಾರು ಮಳೆ ಎಂದು ಹವಮಾನ ಇಲಾಖೆ ತಿಳಿಸಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಸಾಧಾರಣ ಮಳೆಯಾಗಲಿದ್ದು, ಮಳೆಯ ತೀವ್ರತೆ ಕಡಿಮೆಯಿರಲಿದೆ.ಇದನ್ನೂ ಓದಿ:ಬಿರು ಬೇಸಿಗೆಯಲ್ಲೂ ರಾಜ್ಯದಲ್ಲಿ ಮಳೆ ಅಬ್ಬರ – ಬೆಂಗ್ಳೂರು ರಸ್ತೆಗಳು ಜಲಮಯ

ಬೆಳಗಾವಿ, ಹಾವೇರಿ, ಶಿವಮೊಗ್ಗ, ಹಾಸನ, ಮೈಸೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗುಡುಗು ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಬೆಂಗಳೂರಿನಲ್ಲಿ ಮುಂದಿನ 4-5 ದಿನಗಳ ಕಾಲ ಹಗುರ ಮಳೆಯಾಗಲಿದ್ದು, ಸಾಯಂಕಾಲ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಳೆ ಆಗುತ್ತಿದೆ.

ರಾಜ್ಯದಲ್ಲಿ ನಾಲ್ಕೈದು ದಿನ ಕಳೆದ ನಂತರ ಮತ್ತೆ ಉಷ್ಣಾಂಶದಲ್ಲಿ ಹೆಚ್ಚಳವಾಗಲಿದೆ. ಸದ್ಯ ಬೆಂಗಳೂರಲ್ಲಿ 36 ಡಿಗ್ರಿ ಸೆಂಟಿಗ್ರೇಡ್‌ವರೆಗೂ ಉಷ್ಣಾಂಶ ದಾಖಲಾಗಿದ್ದು, ಇದೇ ತಿಂಗಳಲ್ಲಿ ಬೆಂಗಳೂರಲ್ಲಿ 39 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ. ಜೊತೆಗೆ ವಿಜಯಪುರ (Vijayapura) ಸೇರಿದಂತೆ ಕೆಲ ಜಿಲ್ಲೆಗಳಲ್ಲಿ 45-46 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಈ ತಿಂಗಳಲ್ಲೇ ದಾಖಲಾಗಲಿದೆ ಎಂದು ಹವಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಬೇಸಿಗೆಯ ಮಳೆ ನಿನ್ನೆ ಬೆಂಗಳೂರಲ್ಲಿ ಭಾರೀ ಅವಾಂತರವನ್ನುಂಟು ಮಾಡಿದೆ. ಮುಂದಿನ ನಾಲ್ಕು ದಿನ ಮಳೆಯ ಕಾಟ ಇರಲಿದ್ದು, ಜನರು ಸ್ವಲ್ಪ ಎಚ್ಚರಿಕೆಯಿಂದಿರಬೇಕು.ಇದನ್ನೂ ಓದಿ:ಹವಾಮಾನ ವರದಿ 04-04-2025

Share This Article