ಬೆಲೆ ಏರಿಕೆ ಬಗ್ಗೆ ಮುಂಚೆ ಹೇಳಿದ್ರೆ ಕಾಂಗ್ರೆಸ್ 50 ಸೀಟು ಗೆಲ್ಲುತ್ತಿರಲಿಲ್ಲ: ಸಿ.ಟಿ.ರವಿ ಕಿಡಿ

Public TV
1 Min Read

– ಕಾಂಗ್ರೆಸ್ ಆಡಳಿತ ಮಾಡಿದ್ದು 22 ತಿಂಗಳು.. ಅದರಲ್ಲಿ 18 ತಿಂಗಳು ಬೆಲೆ ಏರಿಕೆಯದ್ದೇ ಸುದ್ದಿ

ನವದೆಹಲಿ: ಬೆಲೆ ಏರಿಕೆ ಮಾಡುತ್ತೇವೆ ಅಂತ ಮುಂಚೆ ಹೇಳಿದ್ದರೆ ಕಾಂಗ್ರೆಸ್ 50 ಸೀಟ್ ಕೂಡ ಗೆಲ್ಲುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಯುಗಾದಿ, ರಂಜಾಬ್ ಒಟ್ಟಿಗೆ ಬಂತಲ್ಲ ಅದಕ್ಕೆ ಸರ್ಕಾರ ಹೀಗೆ ಮಾಡಿದೆ. ಆಳ್ವಿಕೆ ಮಾಡಿದ 22 ತಿಂಗಳು, ಅದರಲ್ಲಿ 18 ತಿಂಗಳು ಬೆಲೆ ಏರಿಕೆ ಸುದ್ದಿ. ಹಾಲಿನ ಬೆಲೆ, ಆಲ್ಕೋಹಾಲ್‌ನಿಂದ ಹಿಡಿದು ಎಲ್ಲ ಬೆಲೆ ಏರಿಕೆ ಮಾಡಿದ್ದಾರೆ. ಗ್ಯಾರಂಟಿ ಕೊಡ್ತೀವಿ ಅಂತ ಹೇಳಿದ್ರು. ಹೇಳದೆ ಬೆಲೆ ಏರಿಕೆ ಮೂಲಕ ಬರೆ ಹಾಕಲಾಗುತ್ತಿದೆ. ಇದನ್ನು ಮುಂಚೆ ಹೇಳಿದ್ದರೆ 50 ಸೀಟು ಗೆಲ್ಲುತ್ತಿರಲಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.

ಕಸ ಸಂಗ್ರಹಣೆಗೂ ಸೆಸ್ ವಿಧಿಸಲಾಗುತ್ತಿದೆ. ಬ್ರ‍್ಯಾಂಡ್ ಬೆಂಗಳೂರು ಅಂತಾರೆ. ಆದರೆ ಎಲ್ಲಿ ನೋಡಿದರೂ ಕಸದ ರಾಶಿ. ಜನರು ಶಾಪ ಹಾಕುತ್ತಿದ್ದಾರೆ. ಹಿಮಾಲಯದಲ್ಲಿ ಶೌಚಾಲಯಕ್ಕೂ ಟ್ಯಾಕ್ಸ್ ಹಾಕಿದ್ದರು. ಹಾಗೇ ರಾಜ್ಯದಲ್ಲಿ ಉಸಿರಾಡುವ ಗಾಳಿಗೆ ಟ್ಯಾಕ್ಸ್ ಹಾಕಬಹುದು ಎಂದು ಲೇವಡಿ ಮಾಡಿದ್ದಾರೆ.

ಕೋರ್ಟ್ ಕೇಸ್ ನಿಮಿತ್ಯ ದೆಹಲಿಗೆ ಬಂದಿದ್ದೆ. ಹಾಗೆಯೇ ಬಿಜೆಪಿ ಕಚೇರಿಗೆ ಭೇಟಿ ಮಾಡಿ ಬಂದೆ. ಯತ್ನಾಳ್ ವಿಚಾರಕ್ಕೆ ಸಂಬAಧಿಸಿ ಏನೂ ಮಾತನಾಡಲ್ಲ. ಎಲ್ಲವನ್ನು ಕಾಲಕ್ಕೆ ಬಿಡುತ್ತೇನೆ. ಈಗ ಏನ್ ಮಾಡಿದ್ರೂ ತಪ್ಪಾಗುತ್ತೆ. ಯತ್ನಾಳ್ ಹೊಸ ಪಕ್ಷ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಸಮಯ ಎಲ್ಲವನ್ನು ನಿರ್ಧಾರ ಮಾಡಲಿದೆ. ಬಿಜೆಪಿ ಕಾಂಗ್ರೆಸ್ ಯಾರಿಗೆ ಎಫೆಕ್ಟ್ ಆಗುತ್ತೆ ಗೊತ್ತಿಲ್ಲ. ಹಿಂದೆಯೂ ಬಹಳ ಜನರು ಪಕ್ಷ ಸ್ಥಾಪಿಸಿದವರು ಯಶಸ್ವಿಯಾಗಿಲ್ಲ, ಡ್ಯಾಮೇಜ್ ಮಾಡಬಹುದು ಎಂದು ತಿಳಿಸಿದ್ದಾರೆ.

ಶಾಸಕರ ಪುತ್ರನಿಂದ ಮೊಲ ಬೇಟೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅರಣ್ಯ ಕಾಯ್ದೆ ಜನರಿಗೂ, ಮಂತ್ರಿಗಳಿಗೂ ಅನ್ವಯ ಆಗುತ್ತೆ. ಹಿಂದೆ ಪ್ರಭಾವಿ ರಾಜಕೀಯ ಮನೆಯಲ್ಲಿ ಅತಿಥಿಗಳಿಗೆ ಕಾಡು ಪ್ರಾಣಿ ಸಾಕಿ ಹತ್ಯೆ ಮಾಡಿ ಊಟಕ್ಕೆ ನೀಡಲಾಗುತ್ತಿತ್ತು. ಈ ವಿಷಯದಲ್ಲಿ ಸರ್ಕಾರ ಏನ್ ಮಾಡುತ್ತೆ ನೋಡೋಣ ಎಂದಿದ್ದಾರೆ.

Share This Article