ಅಕ್ರಮವಾಗಿ ಇಸ್ರೇಲ್‌ ಪ್ರವೇಶಿಸಲು ಯತ್ನಿಸಿದ್ದ ಕೇರಳದ ವ್ಯಕ್ತಿ ಗುಂಡಿಗೆ ಬಲಿ

By
1 Min Read

ತಿರುನಂತಪುರಂ: ಜೋರ್ಡಾನ್‌ ಮೂಲಕ ಅಕ್ರಮವಾಗಿ ಇಸ್ರೇಲ್‌ (Israel) ಪ್ರವೇಶಿಸಲು ಯತ್ನಿಸಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬ ಜೋರ್ಡಾನ್‌ ಸೈನಿಕರ (Jordanian soldiers) ಗುಂಡಿಗೆ ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಥಾಮಸ್ ಗೇಬ್ರಿಯಲ್ ಪೆರೆರಾ (47) ಜೋರ್ಡಾನ್‌ ಸೈನಿಕರ ಗುಂಡಿಗೆ ಬಲಿಯಾದ ವ್ಯಕ್ತಿ. ಗಡಿ ದಾಟಿ ಇಸ್ರೇಲ್‌ಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿರುವಾಗ ಹತ್ಯೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಕೇರಳದ (Kerala) ಥಂಬಾ ನಿವಾಸಿಯಾದ ಪೆರೆರಾ ಸಂದರ್ಶಕ ವೀಸಾದಲ್ಲಿ ಜೋರ್ಡಾನ್‌ಗೆ ತೆರಳಿದ್ದ. ಅಲ್ಲಿಂದಲೇ ಗಡಿ ದಾಟಿ ಇಸ್ರೇಲ್‌ ಪ್ರವೇಶಿಸಲು ಯತ್ನಿಸಿದಾಗ ಗುಂಡಿಗೆ ಬಲಿಯಾಗಿದ್ದಾನೆ. ಸದ್ಯ ಈ ಮಾಹಿತಿಯನ್ನು ಮೃತರ ಕುಟುಂಬಸ್ಥರಿಗೆ ತಿಳಿಸಿರುವ ಭಾರತೀಯ ರಾಯಭಾರ ಕಚೇರಿ ಜೋರ್ಡಾನ್‌ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದೆ. ಸದ್ಯದಲ್ಲೇ ಮೃತದೇಹವನ್ನು ಪರಿಶೀಲಿಸಲು ತೆರಳಲಿದೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಪೆರೆರಾ ಜೊತೆಗೆ ಆತನ ಸ್ನೇಹಿತ (ಮೇನಮ್‌ಕುಲಂ ನಿವಾಸಿ) ಕೂಡ ಇಸ್ರೇಲ್‌ ಗಡಿ ದಾಟಲು ಪ್ರಯತ್ನಿಸಿದ್ದ. ಈ ವೇಳೆ ಭದ್ರತಾ ಪಡೆಗಳು ಎಚ್ಚರಿಕೆ ನೀಡಿದವು. ಆದ್ರೆ ಅವರು ಭದ್ರತಾ ಸಿಬ್ಬಂದಿಯ ಮೇಲೆಯೇ ಗುಂಡು ಹಾರಿಸಲು ಮುಂದಾದರು. ಆದ್ದರಿಂದ ಅನಿವಾರ್ಯವಾಗಿ ಗುಂಡುಹಾರಿಸಬೇಕಾಯಿತು ಜೋರ್ಡಾನ್‌ ಸೇನೆ ತಿಳಿಸಿರುವುದಾಗಿ ಭಾರತೀಯ ರಾಯಭಾರ ಕಚೇರಿ ಹೇಳಿದೆ.

ಈ ನಡುವೆ ಪೆರೆರಾ ಮೃತದೇಹವನ್ನ ಮನೆಗೆ ತರಲು ಸಹಾಯ ಮಾಡುವಂತೆ ಕುಟುಂಬವು ರಾಯಭಾರ ಕಚೇರಿ ಅಧಿಕಾರಿಗಳಿಗೆ ಮನವಿ ಮಾಡಿದೆ.

Share This Article