ಪರ ವಿರೋಧ ಬೆನ್ನಲ್ಲೇ ಡಿಸಿಎಂ ಟೆಂಪಲ್‌ ರನ್‌ – ಕಾಪು ಹೊಸ ಮಾರಿಗುಡಿ ಬ್ರಹ್ಮ ಕಲಶೋತ್ಸವದಲ್ಲಿ ಭಾಗಿಯಾಗಲಿರುವ ಡಿಕೆಶಿ

Public TV
1 Min Read

ಉಡುಪಿ: ಹಿಂದುತ್ವ ಜಪದ ಜೊತೆಗೆ ಡಿಸಿಎಂ ಡಿಕೆಶಿ ಟೆಂಪಲ್ ರನ್ ಮುಂದುವರಿಸಿದ್ದಾರೆ. ಇಂದು ಉಡುಪಿಗೆ ಭೇಟಿ ನೀಡಲಿರುವ ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಕಾಪು ಹೊಸ ಮಾರಿಗುಡಿ ಬ್ರಹ್ಮ ಕಲಶೋತ್ಸವದಲ್ಲಿ ಭಾಗವಹಿಸಲಿದ್ದಾರೆ.

30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಕಾಪು ಹೊಸ ಮಾರಿಗುಡಿ (Kaup Marigudi) ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಇಂದು ದೇವರ ಗದ್ದುಗೆಯ ಪ್ರತಿಷ್ಠಾಪನೆ ನಡೆಯಲಿದೆ. ಈ ಪರ್ವಕಾಲದಲ್ಲಿ ಡಿ.ಕೆ ಶಿವಕುಮಾರ್ ದೇಗುಲಕ್ಕೆ ಭೇಟಿ ಕೊಡಲಿದ್ದಾರೆ. ಉಡುಪಿ ಕಾಂಗ್ರೆಸ್ ಭವನದಲ್ಲಿ ನಾಯಕರ ಭೇಟಿಯಾಗಿ, ಕಾರ್ಕಳದಲ್ಲಿ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಡಿಕೆಶಿ ದಕ್ಷಿಣ ಕನ್ನಡ -ಉಡುಪಿ ಪ್ರವಾಸದ ಬಗ್ಗೆ ಸುನಿಲ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದರೂ ಕುಂಭ ಮೇಳದಲ್ಲಿ ಮಿಂದ ಡಿಕೆಶಿ ಈಶಾ ಫೌಂಡೇಶನ್ ಶಿವರಾತ್ರಿಯಲ್ಲಿ ಭಾಗಿಯಾಗಿ, ಹಿಂದುತ್ವದೆಡೆಗೆ ಹೆಜ್ಜೆ ಹಾಕಲು ಮನಸ್ಸು ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹಿಂದುತ್ವದ ಭದ್ರಕೋಟೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಸ್ವಾಗತ ಎಂದು ಬರೆದು ಟಾಂಗ್‌ ಕೊಟ್ಟಿದ್ದಾರೆ.

ಫೆ.9 ರಂದು ಪ್ರಯಾಗ್ ರಾಜ್‍ನ ಮಹಾ ಕುಂಭ ಮೇಳದಲ್ಲಿ ಕುಟುಂಬ ಸಹಿತ ಭಾಗಿಯಾಗಿದ್ದು, ಫೆಬ್ರವರಿ 12ರ ಟಿ.ನರಸಿಪುರದ ಕುಂಭ ಮೇಳದಲ್ಲಿ ಭಾಗಿಯಾಗಿದ್ದರು. ಫೆಬ್ರವರಿ 26ರಂದು ಕೊಯಮುತ್ತೂರಿನಲ್ಲಿ ಅಮಿತ್ ಶಾ ಜೊತೆ ಮಹಾ ಶಿವರಾತ್ರಿ ಉತ್ಸವದಲ್ಲಿ ಭಾಗಿಯಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

Share This Article