2012ರ ಬಳಿಕ ರಣಜಿ ಕಣಕ್ಕಿಳಿದ ಕೊಹ್ಲಿ – ಅರುಣ್ ಜೇಟ್ಲಿ ಕ್ರೀಡಾಂಗಣದ ಬಳಿ ಜನವೋ ಜನ

By
2 Min Read

– ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಆಟದ ನಡುವೆಯೇ ಕೊಹ್ಲಿಯತ್ತ ಓಡೋಡಿ ಬಂದ ಅಭಿಮಾನಿ

ನವದೆಹಲಿ: ಭಾರತ ತಂಡದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli), 13 ವರ್ಷಗಳ ಬಳಿಕ ಇಂದು ರಣಜಿ ಟೂರ್ನಿಗೆ (Ranaji Tourney) ಮರಳಿದ್ದಾರೆ.

ಶ್ರೀಲಂಕಾ ವಿರುದ್ಧ ಏಕದಿನ ಸರಣಿ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡ ಹಿನ್ನೆಲೆ ಬಿಸಿಸಿಐ ಟಾಪ್-ಆಟಗಾರರೂ ದೇಶಿ ಕ್ರಿಕೆಟ್ ಆಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಈ ಹಿನ್ನೆಲೆ ನವದೆಹಲಿ ತಂಡದ ಪರವಾಗಿ ಕೊಹ್ಲಿ ಕಣಕ್ಕಿಳಿದರು.ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ – 15 ಡೇರೆಗಳು ಭಸ್ಮ

2012ರ ಬಳಿಕ ರಣಜಿ ಕ್ರಿಕೆಟ್ ಅಂಗಳಕ್ಕಿಳಿದಿದ್ದ ಕೊಹ್ಲಿ ಅವರನ್ನು ನೋಡಲು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಬಳಿ ಕೊಹ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾದ ದೃಶ್ಯಗಳು ಕಂಡುಬಂದಿದೆ.

ಗುರುವಾರ ದೆಹಲಿ ಹಾಗೂ ರೈಲ್ವೇಸ್ ತಂಡಗಳ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದು, 2012ರ ಬಳಿಕ ಮೊದಲ ಬಾರಿಗೆ ರಣಜಿ ಟೂರ್ನಿಯಲ್ಲಿ ಕಾಣಿಸಿಕೊಂಡರು.

ನಸುಕಿನ ಜಾವ 3 ಗಂಟೆಯಿಂದಲೇ ಅರುಣ್ ಜೇಟ್ಲಿ ಕ್ರೀಡಾಂಗಣದ ಬಳಿ ಅಭಿಮಾನಿಗಳು ಕೊಹ್ಲಿ ನೋಡಲು ಕಿಕ್ಕಿರಿದಿದ್ದರು. ಈ ವೇಳೆ ಗೇಟ್ 16ರಲ್ಲಿ ನೂಕು ನುಗ್ಗಲು ಉಂಟಾಯಿತು. ಇದರಿಂದ ಕೆಲವರು ಗಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಬಂದ ಭದ್ರತಾ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಟಾಸ್ ಗೆದ್ದು ದೆಹಲಿ ತಂಡ ಬೌಲಿಂಗ್ ಆಯ್ದುಕೊಂಡಿತ್ತು. ಈ ವೇಳೆ ದೆಹಲಿ ತಂಡದ ನವದೀಪ್ ಸೈನಿ ಬೌಲಿಂಗ್ ಮಾಡುತ್ತಿರುವಾಗ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ, ಕೊಹ್ಲಿ ಕಾಲು ಮುಟ್ಟಿ ನಮಸ್ಕರಿಸಿದ್ದಾನೆ.

ಬಳಿಕ ಆತನನ್ನು ಭದ್ರತಾ ಸಿಬ್ಬಂದಿ ಮೈದಾನದಿಂದ ಕರೆದುಕೊಂಡು ಹೋಗಿದ್ದು, ಆತನನ್ನು ಹಾಗೆಯೇ ಕಳುಹಿಸಿಕೊಡುವಂತೆ ಕೊಹ್ಲಿ ಸನ್ನೆಯ ಮೂಲಕ ತಿಳಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೊದಲ ದಿನ ಕೈ ತಪ್ಪಿದ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೇಸ್ ತಂಡ 67.4 ಓವರ್‌ಗಳಲ್ಲಿ 241 ರನ್‌ಗಳಿಗೆ ಆಲೌಟ್ ಆಗಿದೆ. ಇನ್ನೂ ತನ್ನ ಸರದಿಯ ಮೊದಲ ಇನ್ನಿಂಗ್ಸ್ ಆರಂಭಿಸಿರುವ ದೆಹಲಿ ತಂಡ 10 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ. ಮೊದಲ ದಿನ ಡೆಲ್ಲಿ ತಂಡ ಒಂದೇ ವಿಕೆಟ್ ಕಳೆದುಕೊಂಡಿದ್ದರಿಂದ ಕೊಹ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಸಜ್ಜಾಗಿರುವ ಕೊಹ್ಲಿ ಶುಕ್ರವಾರ ಅಖಾಡದಲ್ಲಿ ಅಬ್ಬರಿಸುವ ಸಾಧ್ಯತೆಗಳಿವೆ.ಇದನ್ನೂ ಓದಿ: ಮುಡಾ ಹಗರಣದಲ್ಲಿ ಅಕ್ರಮ ಹಣದ ವರ್ಗಾವಣೆಯಾಗಿದೆ – ಇಡಿಯಿಂದ ಸಬ್ ರಿಜಿಸ್ಟ್ರಾರ್‌ಗಳಿಗೆ 104 ಪುಟಗಳ ಪತ್ರ

Share This Article