ಸತೀಶ್‌ ಜಾರಕಿಹೊಳಿಯನ್ನು ಮಣಿಸಲು ಡಿಕೆಶಿಯಿಂದ ಶ್ರೀರಾಮುಲು ಆಪರೇಷನ್‌- ರೆಡ್ಡಿ ಬಾಂಬ್‌

Public TV
1 Min Read

ಬೆಂಗಳೂರು: ಜನಾರ್ದನ ರೆಡ್ಡಿ (JanardhanReddy) ಮತ್ತು ಶ್ರೀರಾಮುಲು (Sriramulu) ಮಧ್ಯೆ ನಡೆಯುತ್ತಿರುವ ಕಿತ್ತಾಟಕ್ಕೆ ಈಗ ಡಿಕೆ ಶಿವಕುಮಾರ್‌ (DK Shivakumar ) ಹೆಸರು ಎಂಟ್ರಿಯಾಗಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ದನ ರೆಡ್ಡಿ, ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿಯನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲು ಅವರನ್ನು  ಪಕ್ಷಕ್ಕೆ ಕರೆದುಕೊಳ್ಳುವ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ ಎಂದು ಬಾಂಬ್‌ ಸಿಡಿಸಿದ್ದಾರೆ.

ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಶ್ರೀರಾಮುಲು ನಾನು ಪಕ್ಷ ಬಿಡಲು ಸಿದ್ಧ ಎಂದು ಹೇಳಿದ್ದರು. ಈಗ ಜನಾರ್ದನ ರೆಡ್ಡಿ ಬಾಂಬ್‌ ಸಿಡಿಸುವ ಮೂಲಕ ಶ್ರೀರಾಮಲು ಕಾಂಗ್ರೆಸ್‌ ಹೋಗುವ ಸುಳಿವನ್ನು  ನೀಡಿದ್ದಾರೆ.

ಶ್ರೀರಾಮುಲು ಪಕ್ಷ ಬಿಡುವುದು ಅವರ ವೈಯಕ್ತಿಕ ವಿಚಾರ. ಹೋಗುವುದಾದರೆ ಅವರು ಹೋಗಲಿ.  ಶ್ರೀರಾಮುಲು ಪಕ್ಷ ಬಿಟ್ಟು ಹೋಗುವುದು ಹೊಸದೆನಲ್ಲ. ಈ ಹಿಂದೆ ಬಿಎಸ್‌ಆರ್‌ ಪಕ್ಷ ಮಾಡುವಾಗಲೇ ನಾನು ಬಿಜೆಪಿ ಪಕ್ಷ ಬಿಡಬೇಡ ಅಂತ ಹೇಳಿದ್ದೆ. ಈ ಸಂದರ್ಭದಲ್ಲಿ ಸಿಬಿಐ ನನ್ನನ್ನು ಬಂಧಿಸುತ್ತದೆ, ನಮಗೆ ಬಹಳ ಕಷ್ಟ ಇದೆ. ಹೀಗಾಗಿ ಸುಮ್ಮನಿದ್ದು ಪಕ್ಷ ತೊರೆಯಬೇಡ ಎಂದು ಸಲಹೆ ನೀಡಿದ್ದೆ. ರಾಜಕೀಯ ಸಂಕಷ್ಟದ ಸಮಯದಲ್ಲಿ ನನ್ನ ಮಾತನ್ನು ಕೇಳಲಿಲ್ಲ. ಈಗ ಯಾರದ್ದೋ ಮಾತು ಕೇಳಿ ಬಿಜೆಪಿ ಬಿಡುವುದಾದರೆ ಬಿಡಲಿ. ನನ್ನ ಮೇಲೆ ಆರೋಪ ಮಾಡಿ ಹೋಗುವುದು ಬೇಡ. ಬಳ್ಳಾರಿ ಭಾಗದಲ್ಲಿ ಅವರು ಪಕ್ಷ ಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಜನಾರ್ದನ ರೆಡ್ಡಿ ಹೇಳುವಂತೆ ಶ್ರೀರಾಮುಲು ಕಾಂಗ್ರೆಸ್‌ಗೆ ಹೋಗುತ್ತಾರಾ? ಕಾಂಗ್ರೆಸ್‌ನಲ್ಲಿ ಸತೀಶ್ ಜಾರಕಿಹೊಳಿ (Satish Jarkiholi) ಪರ್ಯಾಯವಾಗಿ ಶ್ರೀರಾಮುಲು ಬೆಳೆಸಲು ಡಿಕೆಶಿ ಸಂಚು ರೂಪಿಸಿದ್ದಾರಾ ಎಂಬ ಪ್ರಶ್ನೆಗೆ ಡಿಕೆ ಶಿವಕುಮಾರ್‌ ಮತ್ತು ಶ್ರೀರಾಮುಲು ಈಗ ಉತ್ತರ ಹೇಳಬೇಕಿದೆ.

Share This Article