ಸೈಫ್‌ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್‌ ಕಸ್ಟಡಿಗೆ

Public TV
1 Min Read

ಮುಂಬೈ: ಸೈಫ್‌ ಅಲಿಖಾನ್‌ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಆರೋಪಿಯನ್ನು ಮುಂಬೈ ಕೋರ್ಟ್‌ 5 ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ.

ವಿಚಾರಣೆ ಸಂದರ್ಭದಲ್ಲಿ ಈ ಕೃತ್ಯದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಸೈಫ್‌ ಅಲಿಖಾನ್‌ ಮನೆಯಲ್ಲಿ ನಡೆದ ಕಳ್ಳತನ (Theft) ಯತ್ನಕ್ಕೆ ಸಂಬಂಧಿಸಿದಂತೆ  ಆರೋಪಿ  ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್‌ನನ್ನು (Mohammad Sariful Islam Shehzad)  ಥಾಣೆಯಲ್ಲಿ ಬಂಧಿಸಲಾಗಿತ್ತು.

ಈ ಆರೋಪಿ ಬಾಂಗ್ಲಾದೇಶದವನಾಗಿರಬಹುದು ಎಂದು ತನಿಖೆಯಿಂದ ತಿಳಿದುಬಂದಿದೆ. ಅವನ ಬಳಿ ಯಾವುದೇ ಭಾರತೀಯ ದಾಖಲೆಗಳಿಲ್ಲ. ಅವನು ಬಾಂಗ್ಲಾದೇಶದವನೆಂದು ನಾವು ಶಂಕಿಸಿದ್ದೇವೆ, ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅವನ ವಿರುದ್ಧದ ಪ್ರಕರಣಕ್ಕೆ ಪಾಸ್‌ಪೋರ್ಟ್ ಕಾಯ್ದೆಯ ಆರೋಪಗಳನ್ನು ಸೇರಿಸಿದ್ದೇವೆ ಎಂದು ಡಿಸಿಪಿ ದೀಕ್ಷಿತ್ ಗೆಡಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಆರೋಪಿ ಬಾಂಗ್ಲಾದೇಶದವನೆಂದು ಸೂಚಿಸುವ ಕೆಲವು ವಸ್ತುಗಳನ್ನು ಆತನಿಂದ ವಶಪಡಿಸಿಕೊಂಡಿದ್ದೇವೆ. ಅವನು ಭಾರತಕ್ಕೆ ಅಕ್ರಮವಾಗಿ ಬಂದು ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ. ಸುಮಾರು ನಾಲ್ಕು ತಿಂಗಳಿನಿಂದ ಮುಂಬೈ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದ. ನಂತರ ಮನೆಗೆಲಸದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲ ಬಾರಿಗೆ ಸೈಫ್‌ ನಿವಾಸ ಪ್ರವೇಶಿಸಿದ್ದಾನೆ. ದರೋಡೆ ಮಾಡುವ ಉದ್ದೇಶದಿಂದಲೇ ಆತ ಮನೆಗೆ ಪ್ರವೇಶಿಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆಯಲಾಗುವುದು. ನಂತರ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಹೇಳಿದರು.

ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಹೆಸರುಳನ್ನು ಇಟ್ಟುಕೊಂಡು ಓಡಾಡುತ್ತಿದ್ದ.

Share This Article