2027ರ ವೇಳೆಗೆ ಮೈಸೂರು-ಕುಶಾಲನಗರ 4 ಪಥದ ರಸ್ತೆ ಕಾಮಗಾರಿ ಪೂರ್ಣ – ಯದುವೀರ್

Public TV
2 Min Read

ಮಡಿಕೇರಿ: 2027ರ ಜೂನ್‌ ವೇಳೆಗೆ ಮೈಸೂರು-ಕುಶಾಲನಗರ 4 ಪಥದ ರಸ್ತೆ (Mysuru Kushalanagar National Highway) ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Wadiyar) ತಿಳಿಸಿದ್ದಾರೆ.

ಮೈಸೂರು-ಕುಶಾಲನಗರ 4 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನೆಯ ಕುರಿತು ಮೈಸೂರು- ಕೊಡಗು ಸಂಸದ ಯದುವೀರ್ ಒಡೆಯರ್‌ ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 2027ರ ಜೂನ್‌ ವೇಳೆಗೆ ಈ ನಾಲ್ಕು ಪಥದ ಯೋಜನೆ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಂಜೂರು ಮಾಡಿದ 4,129 ಕೋಟಿ ರೂ. ಬಜೆಟ್‌ನೊಂದಿಗೆ ಈ ಯೋಜನೆಯು ಈಗಾಗಲೇ ಗಣನೀಯ ಪ್ರಗತಿ ಕಾಣುತ್ತಿದೆ ಎಂದು ಸಂಸದರು ಹೇಳಿದ್ದಾರೆ.

ಯದುವೀರ್‌ ಎಕ್ಸ್‌ನಲ್ಲಿ ಏನಿದೆ?
ಜೂನ್ 2027 ರೊಳಗೆ ಪೂರ್ಣಗೊಳ್ಳಲು ನಿರ್ಧರಿಸಲಾಗಿರುವ ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕಾಮಗಾರಿಯು ಇದೀಗ ಸ್ಥಿರ ಪ್ರಗತಿಯಲ್ಲಿದೆ. 92.3 ಕಿ.ಮೀ. ಗಳಷ್ಟು ವಿಸ್ತಾರವಾದ ಈ ನಾಲ್ಕು ಪಥದ ಪ್ರವೇಶ-ನಿಯಂತ್ರಿತ ಹೆದ್ದಾರಿಯು, ಮೈಸೂರು ಮತ್ತು ಕುಶಾಲನಗರದ ಪ್ರಯಾಣದ ಸಮಯವನ್ನು ಕನಿಷ್ಠ 1-1.5 ಗಂಟೆಗಳಿಗೆ ಕಡಿತಗೊಳಿಸಲಿದೆ. ಮತ್ತು ಬೆಂಗಳೂರಿನಿಂದ ಕುಶಾಲನಗರದವರೆಗೆ ಪ್ರಯಾಣಿಸಲು ಕೇವಲ 3-3.5 ಗಂಟೆಗಳ ಸಮಯ ತಗಲುವಂತೆ ಮಾಡುತ್ತದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಂಜೂರು ಮಾಡಿದ 4,129 ಕೋಟಿ ರೂ. ಬಜೆಟ್‌ನೊಂದಿಗೆ ಈ ಯೋಜನೆಯು ಈಗಾಗಲೇ ಗಣನೀಯವಾದ ಪ್ರಗತಿ ಕಾಣುತ್ತಿದೆ. ಇದರಲ್ಲಿ ಹೆಚ್ಚಿನ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಮತ್ತು ಅರಣ್ಯ ಪ್ರದೇಶದ ತೆರವಿಗೆ ಅನುಮತಿಯೂ ದೊರೆತಿದೆ.

ಈ ಬಹುನಿರೀಕ್ಷಿತ ಯೋಜನೆಯು ಪೂರ್ಣಗೊಂಡ ನಂತರ ಮೈಸೂರು ಮತ್ತು ಕೊಡಗಿನಲ್ಲಿ ಹೆದ್ದಾರಿ ಸಂಪರ್ಕ ಸುಧಾರಣೆಗೊಳ್ಳುವುದರ ಜೊತೆಗೆ ಆರ್ಥಿಕ ಬೆಳವಣಿಗೆಗೆ ವೇಗ ನೀಡುತ್ತದೆ. ಅಲ್ಲದೇ ವ್ಯಾಪಾರ ಮತ್ತು ಹೂಡಿಕೆಗಳನ್ನು ಆಕರ್ಷಿಸಲು ಪ್ರವಾಸೋದ್ಯಮ ಉತ್ತೇಜಿಸಲು ಮತ್ತು ಸ್ಥಳೀಯ ವ್ಯವಹಾರಗಳಿಗೆ ಅವಕಾಶಗಳನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಈ ಯೋಜನೆಯಿಂದಾಗಿ ನಮ್ಮ ಪ್ರದೇಶಕ್ಕೆ ಗರಿಷ್ಠ ಮಟ್ಟದ ಪ್ರಯೋಜನಗಳು ದೊರೆಯಲಿವೆ ಎಂದು ತಿಳಿಸಲು ಹರ್ಷಿಸುತ್ತೇನೆ. ನಿಮ್ಮ ಪ್ರತಿನಿಧಿಯಾಗಿ ಕ್ಷೇತ್ರದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ದಿಗೆ ಬದ್ಧನಾಗಿ ನನ್ನ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Share This Article