ಉಡುಪಿ: ಪತ್ನಿಗೆ ನ್ಯಾಯ ದೊರಕಿಸಿ ಎಂದ ಪೇದೆಗೆ ಸಸ್ಪೆಂಡ್ ಭಾಗ್ಯ!

Public TV
2 Min Read

ಉಡುಪಿ: ಉಡುಪಿಯಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕಾಶ್ ಅವರ ಗರ್ಭಿಣಿ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಆರೋಪಿ ಕುಮಾರ್ ಗೆ ಪೊಲೀಸರು ಬೆಂಬಲವಾಗಿ ನಿಂತಿರುವ ಆರೋಪ ಕೇಳಿ ಬಂದಿದೆ.

ನಡೆದಿದ್ದೇನು?:  ಏಪ್ರಿಲ್ 5 ರಂದು ಮಲ್ಪೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕಾಶ್ ಪತ್ನಿ ಜ್ಯೋತಿ ಗರ್ಭಿಣಿಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆ ಮೆಡಿಕಲೊಂದರ ಸಮೀಪದಲ್ಲಿ ಕುಮಾರ್ ಎಂಬ ಯುವಕ ಕಣ್ಣೊಡೆದು ಮೈತಟ್ಟುವ ಮೂಲಕ ಕಿರುಕುಳ ನೀಡಿದ್ದನು. ಇದನ್ನು ಪ್ರಶ್ನಿಸಿದ ಪ್ರಕಾಶ್ ಆತನಿಗೆ ಎರಡೇಟು ಕೊಟ್ಟಿದ್ದರು. ಅಲ್ಲದೇ ಪತ್ನಿಯ ಮೇಲೆ ಕಿರುಕುಳ ನೀಡಿದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದಾಗ ಪುಂಡಾಟಿಕೆ ಮಾಡಿದ ಯುವಕ ಕುಮಾರ್ ಮೇಲೆ ಕೇಸು ದಾಖಲಿಸದಂತೆ ರಾಜಕೀಯ ನಾಯಕರ ಒತ್ತಡ ತರಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿ ಕುಮಾರ್

ಕಿರುಕುಳ ನೀಡಿದ ಯುವಕನಿಗೆ ಪೊಲೀಸ್ ಬೆಂಬಲ?: ಆರೋಪಿ ಕುಮಾರ್, ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಫಿಶ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ದಾನೆ. ಮಧ್ವರಾಜ್ ಒಡೆತನದ ರಾಜ್ ಫಿಶ್ ಮಿಲ್ ನೌಕರನಾಗಿರೋ ಕುಮಾರ್ ಘಟನೆಯ ಬಗ್ಗೆ ಸಚಿವರ ಪತ್ನಿ ಬಳಿ ದೂರು ನೀಡಿದ್ದನಂತೆ. ಅಂತೆಯೇ ಪತಿ ಪ್ರಮೋದ್ ಮಧ್ವರಾಜ್ ಗೆ ಪತ್ನಿ ದೂರು ನೀಡಿದ್ದಾರೆ.

ಪೇದೆ ಸಸ್ಪೆಂಡ್: ಇತ್ತ ತಮ್ಮ ಪತ್ನಿಗೆ ಕಿರುಕುಳ ನೀಡಿದ ಆರೋಪಿ ಕುಮಾರ್ ವಿರುದ್ಧ ಪ್ರಕಾಶ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದಾಗ ತಾತ್ಕಾಲಿಕವಾಗಿ ಕೆಲಸದಿಂದ ವಜಾ ಮಾಡಿದ್ದಾರೆ. ಮಲ್ಪೆ ಠಾಣೆಯ ಕಾನ್‍ಸ್ಟೇಬಲ್ ಪ್ರಕಾಶ್‍ರನ್ನು ಅಮಾನತು ಮಾಡಿಸಿದ್ದಾರೆ. ಈ ಬಗ್ಗೆ ಪತ್ನಿ ಜ್ಯೋತಿ ಉಡುಪಿ ನಗರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದ್ರೆ ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ ನಮಗೆ ಗೊತ್ತೇ ಇಲ್ಲ. ಏನಿದು ಪ್ರಕರಣ ಅನ್ನೋ ಉತ್ತರ ನೀಡುತ್ತಿದ್ದಾರೆ ಅಂತಾ ಹೇಳಲಾಗಿದೆ.

ಹಲ್ಲೆ ಸರಿಯಲ್ಲ: ನಮ್ಮ ಕಂಪನಿಯ ಕಾರ್ಮಿಕನ ಮೇಲೆ ಪೇದೆ ಹಲ್ಲೆ ನಡೆಸಿದ್ದು ಸರಿಯಲ್ಲ. ಹಲ್ಲೆಯಿಂದಾಗಿ ಕಂಪನಿಯ ಟ್ರ್ಯಾಕ್ಟರ್ ಚಾಲಕ ಕುಮಾರ್ ಬೆನ್ನು ಮೂಳೆಗೆ ಪೆಟ್ಟಾಗಿದೆ. ಪೊಲೀಸರು ಆ ರೀತಿ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಸಸ್ಪೆಂಡ್ ಮಾಡಿದ ಮೇಲೆ ಪೇದೆ ಪತ್ನಿ ಕಂಪ್ಲೆಂಟ್ ಮಾಡಿರಬಹುದು. ಚಾಲಕ ಕುಮಾರ್ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ನಾವು ನಮ್ಮ ಕಂಪನಿಯಿಂದಲೇ ಆತನ ಪರವಾಗಿ ದೂರು ನೀಡಿದ್ದೇವೆ ಅಂತಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *