– ಪ್ರತಿ ತಿಂಗಳು ಜಲಮಂಡಳಿಗೆ 41 ಕೋಟಿ ರೂ. ನಷ್ಟ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ದರ ಏರಿಕೆಯ ಸುಳಿವು ಸಿಕ್ಕಿದ್ದು, ಜನವರಿ 2ನೇ ವಾರವೇ ದರ ನಿರ್ಧಾರ ಆಗುವ ಸಾಧ್ಯತೆ ಇದೆ.
ನೀರಿನ ದರ ಏರಿಕೆ ಬಗ್ಗೆ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಮಾತನಾಡಿ, ಜನವರಿ ಎರಡನೇ ವಾರ ಬೆಂಗಳೂರು ಶಾಸಕರ ಜೊತೆ ಡಿಸಿಎಂ ಸಭೆ ಮಾಡ್ತಾರೆ. ಬೆಂಗಳೂರಿನ ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.
ಜಲಮಂಡಳಿ 1000 ಲೀಟರ್ ನೀರು ಪೂರೈಕೆ ಮಾಡುವುದಕ್ಕೆ 52 ರೂಪಾಯಿ ಖರ್ಚು ಮಾಡ್ತಿದೆ. ಆದರೆ, 25 ರಿಂದ 40 ರೂ. ಮಾರುತ್ತಾ ಇದ್ದೇವೆ. ಇದರಿಂದ ಜಲಮಂಡಳಿಗೆ ನಷ್ಟ ಆಗ್ತಿದೆ. ಪ್ರತಿ ತಿಂಗಳಿಗೆ ಜಲಮಂಡಳಿಗೆ 41 ಕೋಟಿ ರೂಪಾಯಿ ನಷ್ಟ ಆಗ್ತಿದೆ ಎಂದು ಹೇಳಿದರು.
ಕಾವೇರಿ ಐದನೇ ಹಂತ ಆದ ಮೇಲೆ 82 ಕೋಟಿ ನಷ್ಟ ಆಗುತ್ತೆ. ವಾರ್ಷಿಕವಾಗಿ ಸಾವಿರಾರು ಕೋಟಿ ನಷ್ಟ ಆಗ್ತಿದೆ. ಹಾಗಾಗಿ ದರ ಏರಿಕೆ ಮಾಡಬೇಕಿದೆ. ಜಲಮಂಡಳಿಗೆ ಆರ್ಥಿಕ ಹೊರೆಯಾಗ್ತಿದೆ. ಶಾಸಕರ ಸಭೆ ಬಳಿಕ ನೀರಿನ ದರ ಏರಿಕೆ ಆಗುತ್ತೆ ಎಂದರು.
ಎಷ್ಟು ಪರ್ಸೆಂಟೇಜ್ ಏರಿಕೆ ಆಗುತ್ತೆ ಅನ್ನೋದು ನಿರ್ಧಾರ ಆಗುತ್ತೆ. ಉಪಮುಖ್ಯಮಂತ್ರಿಗಳು ನಿರ್ಧಾರ ಮಾಡ್ತಾರೆ. ಬೆಂಗಳೂರಿನ ಎಲ್ಲಾ ಶಾಸಕರಿಗೂ ಜಲಮಂಡಳಿ ನಷ್ಟದ ಬಗ್ಗೆ ಪತ್ರದಲ್ಲಿ ವಿವರಿಸಿದ್ದೇವೆ ಎಂದು ತಿಳಿಸಿದರು.