7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್

By
2 Min Read

ಬೆಂಗಳೂರು: ಬೆನ್ನುನೋವಿನ ಶಸ್ತ್ರಚಿಕಿತ್ಸೆ (Surgery) ನೆಪ ಹೇಳಿ ಮಧ್ಯಂತರ ಜಾಮೀನು ಪಡೆದಿದ್ದ ಆರೋಪಿ ನಟ ದರ್ಶನ್‌ (Darshan) 7 ವಾರಗಳ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸದೇ ಬಿಜಿಎಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್‌ಗೆ ಕಳೆದ ಅಕ್ಟೋಬರ್‌ 31ರಂದು ಹೈಕೋರ್ಟ್‌ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪಡೆದ 2-3 ದಿನಗಳ ಬಳಿಕ ದರ್ಶನ್‌ ಆಸ್ಪತ್ರೆಗೆ ದಾಖಲಾದರೂ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಫೋಟೋ ಸಹ ವೈರಲ್‌ ಆಗಿತ್ತು. ಇದೀಗ ಚಿಕಿತ್ಸೆ ಪಡೆಯದೇ ದರ್ಶನ್‌ ಡಿಸ್ಚಾರ್ಜ್‌ ಆಗಿದ್ದಾರೆ.

ಫಿಸಿಯೋಥೆರಪಿ (Physiotherapy) ಮೂಲಕವೇ ಬೆನ್ನುನೋವು ಗುಣಪಡಿಸಿಕೊಳ್ಳುವ ಪ್ಲ್ಯಾನ್‌ ಮಾಡಿರುವ ದರ್ಶನ್‌ ಕುಟುಂಬ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿದೆ. ಆಸ್ಪತ್ರೆಯ ಬಿಲ್‌ ಸೇರಿದಂತೆ, ಎಲ್ಲಾ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ದರ್ಶನ್‌ ತಮ್ಮ ಕಾರಿನಲ್ಲಿ ತೆರಳಿಳುತ್ತಿದ್ದಾರೆ, ನಟ ಧನ್ವೀರ್‌ ಕಾರು ಚಾಲನೆ ಮಾಡುತ್ತಿದ್ದಾರೆ.

ಬೆಳಗ್ಗೆ 6 ಗಂಟೆಯಿಂದಲೇ ಪತ್ನಿ ವಿಜಯಲಕ್ಷ್ಮಿ ಅವರು KA-03 NT-6633 ರೇಂಜ್ ರೋವರ್ ಕಾರಿನಲ್ಲಿ ಆಸ್ಪತ್ರೆ ಆವರಣಕ್ಕೆ ಆಗಮಿಸಿದ್ದರು. ಇದರೊಂದಿಗೆ ದರ್ಶನ್‌ ಪುತ್ರ, ನಟ ಧನ್ವೀರ್, ಸಹೋದರ ದಿನಕರ್ ಸಹ ಅಸ್ಪತ್ರೆ ಆವರಣದಲ್ಲೇ ಬೀಡುಬಿಟ್ಟಿದ್ದರು. ದರ್ಶನ್‌ ಡಿಸ್ಚಾರ್ಜ್‌ ಆಗುತ್ತಿದ್ದಂತೆ ನೇರ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರ ಫ್ಲಾಟ್‌ಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಡಿ.11ಕ್ಕೆ ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾದರೂ, ಕೋರ್ಟ್‌ ಅವಧಿ ವಿಸ್ತರಣೆ ಮಾಡಿತ್ತು. ಡಿ.13ರಂದು ನ್ಯಾ. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 7 ಆರೋಪಿಗಳಿಗೂ ರೆಗ್ಯೂಲರ್‌ ಬೇಲ್‌ ಮಂಜೂರು ಮಾಡಿತು.

ಜಾಮೀನು ಸಿಕ್ಕಿದ್ದು ಹೇಗೆ?
ಜಾಮೀನು ಮೊದಲ ನಿಯಮ. ಆರೋಪಿಗಳಿಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಆರೋಪಿಗಳು 6 ತಿಂಗಳಿನಿಂದ ಜೈಲಿನಲ್ಲಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಬಂಧನ ಮಾಡುವಾಗ ನಿಯಮಗಳ ಪಾಲನೆ ಆಗಿಲ್ಲ. ಬಂಧನ ವೇಳೆ ಆರೋಪಿಗೆ ಬಂಧನದ ಕಾರಣ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶವಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಗ್ರೌಂಡ್ಸ್ ಆಫ್ ಅರೆಸ್ಟ್ ಪಾಲಿಸಿಲ್ಲ. ಆರೋಪಿಗಳ ನಿರ್ದಿಷ್ಟ ಪಾತ್ರದ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲೂ ವ್ಯತ್ಯಾಸ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತು.

Share This Article