ಉಕ್ಕು ಕ್ಷೇತ್ರದಲ್ಲಿ ಹಸಿರು ಕ್ರಾಂತಿ – ಪ್ರಧಾನಿ ಮೋದಿ ಕನಸು ಅನಾವರಣಗೊಳಿಸಿದ ಹೆಚ್‌ಡಿಕೆ

Public TV
2 Min Read

ನವದೆಹಲಿ: ಉಕ್ಕು ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಕನಸಿನ ಕೂಸಾದ `ಸಾಂಸ್ಥಿಕ ರಚನೆಗಳ ವೈಜ್ಞಾನಿಕ ವರ್ಗೀಕರಣ’ ವರದಿಯನ್ನು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಬಿಡುಗಡೆಗೊಳಿಸಿದರು.

ನವದೆಹಲಿಯ (New Delhi) ವಿಜ್ಞಾನ ಭವನದಲ್ಲಿ ಗುರುವಾರ (ಡಿ.12) ಉಕ್ಕು ಸಚಿವಾಲಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪರಿಸರಪೂರಕವಾದ ಗ್ರೀನ್ ಸ್ಟೀಲ್ ತಯಾರಿಕೆಗೆ ಪ್ರಾಮುಖ್ಯತೆ ನೀಡಲು ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಇದನ್ನೂ ಓದಿ: ಡಿ.14ರಂದು ʻಮಹಾʼ ಸಂಪುಟ ವಿಸ್ತರಣೆ – ಪ್ರಧಾನಿ ಮೋದಿ ಭೇಟಿಯಾದ ಸಿಎಂ ಫಡ್ನವಿಸ್‌

ಭಾರತವು ಪರಿಸರ ರಕ್ಷಣೆಗೆ ಎಲ್ಲಾ ಉಪಕ್ರಮಗಳನ್ನು ಕೈಗೊಂಡಿದೆ. ಪ್ರಧಾನಿ ಮೋದಿ ಅವರು ಈ ನಿಟ್ಟಿನಲ್ಲಿ ಹೆಚ್ಚು ಒತ್ತಾಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ಯಾಕ್ಸಾನಮಿಯನ್ನು (Taxonomy) ಬಿಡುಗಡೆಗೊಳಿಸಲಾಗಿದೆ. ಇದು ದೇಶದ ಅತ್ಯಂತ ಪ್ರಮುಖ ಉದ್ಯಮಗಳಲ್ಲಿ ಒಂದಾದ ಉಕ್ಕು ಉದ್ಯಮದ ಸುಸ್ಥಿರತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಟ್ಯಾಕ್ಸಾನಮಿ ಬಿಡುಗಡೆಯು ಒಂದು ಐತಿಹಾಸಿಕ ಹೆಜ್ಜೆ ಎಂದು ನಾನು ಹೇಳಬಯಸುತ್ತೇನೆ. ಏಕೆಂದರೆ, ಇದು ಉಕ್ಕಿನ ಉತ್ಪಾದನೆಯನ್ನು ಸಂಪೂರ್ಣವಾಗಿ ಮಾಲಿನ್ಯ ಮುಕ್ತಗೊಳಿಸಲು ಸಮಗ್ರವಾಗಿ ಕೆಲಸ ಮಾಡುತ್ತದೆ. ಅಲ್ಲದೆ, ಪರಿಸರಕ್ಕೆ ಪೂರಕವಾಗಿ ಹೊಣೆಗಾರಿಕೆಯನ್ನು ಉತ್ತೇಜಿಸುವ ಕಾರ್ಯವನ್ನೂ ಮಾಡುತ್ತದೆ ಎಂದು ಹೇಳಿದರು.

ಪ್ರಧಾನಿಯವರ ನಾಯಕತ್ವದಲ್ಲಿ ಭಾರತದ ಉಕ್ಕಿನ ಕ್ಷೇತ್ರವು ತನ್ನ ಬೆಳವಣಿಗೆಯ ಪಥವನ್ನು ಮತ್ತಷ್ಟು ವಿಸ್ತೃತಗೊಳಿಸಿಕೊಂಡು, ಸುಸ್ಥಿರ ಜಾಗತಿಕ ಪರಿವರ್ತನೆಗೆ ನಾಂದಿ ಹಾಡಿದೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ರಾಷ್ಟ್ರೀಯ ಗ್ರೀನ್ ಸ್ಟೀಲ್ ಮಿಷನ್‌ನ ಕಾರ್ಯಸೂಚಿಯ ಪ್ರಕಾರ, ಹೈಡ್ರೋಜನ್ ಆಧಾರಿತ ಉಕ್ಕು ಉತ್ಪಾದನೆ ಮತ್ತು ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ತರುವುದು. ಸುಸ್ಥಿರ ಅಭಿವೃದ್ಧಿಗೆ ಹಸಿರು ಪೂರಕ ತಂತ್ರಜ್ಞಾನಗಳನ್ನು ಉತ್ತೇಜಿಸುವುದು. ಉಕ್ಕಿನ ಮರುಬಳಕೆ ಹೆಚ್ಚಳ ಮಾಡುವುದು ಮತ್ತು ಉತ್ತೇಜಿಸುವುದು. ಉಕ್ಕಿನ ಸುಸ್ಥಿರ ಉತ್ಪಾದನೆಗೆ ಹಾಗೂ ಸಂಶೋಧನೆ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತದೆ ಎಂದು ಉಲ್ಲೇಖಿಸಿದರು.

ಈಗ ಬಿಡುಗಡೆಯಾಗಿರುವ ಟ್ಯಾಕ್ಸಾನಮಿಯು ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನು ಪೂರೈಸುತ್ತದೆ. ಜಾಗತಿಕವಾಗಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಚೌಕಟ್ಟನ್ನು ರೂಪಿಸಲು ನೀಡಿದ ಕೊಡುಗೆಗಳಿಗಾಗಿ ಉಕ್ಕು ಉತ್ಪಾದಕರು, ನೀತಿ ನಿರೂಪಕರು ಮತ್ತು ಪರಿಸರ ತಜ್ಞರು ಸೇರಿದಂತೆ ಅನೇಕರಿಗೆ ಕೃತಜ್ಞತೆ ಸಲ್ಲಿಸಿದರು.

 

ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮ ಮತ್ತು ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್ ಅವರು ಸೇರಿದಂತೆ ಸಚಿವಾಲಯದ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಇದನ್ನೂ ಓದಿ: ಒಂದು ದೇಶ, ಒಂದು ಚುನಾವಣೆ ಮಸೂದೆಗೆ ಮೋದಿ ಸಂಪುಟ ಅನುಮೋದನೆ

Share This Article