ಗ್ರೇಟರ್ ನೋಯ್ಡಾದಲ್ಲಿ ನೈಜೀರಿಯಾ ಪ್ರಜೆಗಳ ಮೇಲೆ ದಾಳಿ: ಸಿಎಂ ಆದಿತ್ಯನಾಥ್‍ಗೆ ಕರೆ ಮಾಡಿ ವರದಿ ಕೇಳಿದ ಸುಷ್ಮಾ ಸ್ವರಾಜ್

Public TV
1 Min Read

ನವದೆಹಲಿ: 12ನೇ ತರಗತಿಯ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾದಲ್ಲಿ ಸೋಮವಾರದಂದು ಆಫ್ರಿಕಾ ಪ್ರಜೆಗಳ ಮೇಲೆ ದಾಳಿ ನಡೆದಿದ್ದು ಈ ಬಗ್ಗೆ ವರದಿ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕೇಳಿದ್ದಾರೆ.

ಶನಿವಾರದಂದು ಗ್ರೇಟರ್ ನೋಯ್ಡಾದಲ್ಲಿ 19 ವರ್ಷದ ಮನಿಷ್ ಖರಿ ಮೃತಪಟ್ಟಿದ್ದು, ಈತ ಮಾದಕ ದ್ರವ್ಯದ ಓವರ್‍ಡೋಸ್‍ನಿಂದ ಸಾವನ್ನಪ್ಪಿದ್ದಾನೆಂದು ಸ್ಥಳಿಯರು ಆರೋಪಿಸಿದ್ರು. ಮನಿಷ್ ಕೊನೆಯ ಬಾರಿಗೆ ನೈಜೀರಿಯಾ ಪ್ರಜೆಗಳ ಗುಂಪಿನ ಜೊತೆಯಲ್ಲಿದ್ದಿದ್ದು ನೋಡಿದ್ದೆವು ಎಂದು ಸ್ಥಳೀಯರು ಹೇಳಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ನೈಜೀರಿಯಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು.

ಯುವಕನ ಸಾವಿನ ಹಿನ್ನೆಲೆಯಲ್ಲಿ ಸೋಮವಾರದಂದು ನೂರಾರು ಜನ ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಗ್ರೇಟರ್ ನೊಯ್ಡಾದ ಪರಿ ಚೌಕ್ ಬಳಿ 4 ನೈಜೀರಿಯಾ ಪ್ರಜೆಗಳ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ನೈಜೀರಿಯ ಪ್ರಜೆಗಳು ಗಾಯಗೊಂಡಿದ್ದಾರೆ. ಈ ಬಗ್ಗೆ ನೈಜೀರಿಯಾದ ಯುವಕನೊಬ್ಬ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದು, ಇದಕ್ಕೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರೊಂದಿಗೆ ನಾನು ಮಾತನಾಡಿದ್ದೇನೆ. ಈ ಬಗ್ಗೆ ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *