ಹಿರಿಯ ಶಾಸಕನಾದ್ರೂ ಉದಾಸೀನ ಮನೋಭಾವದಿಂದ ನೋಡ್ತಾರೆ; ಬೈರತಿ ಸುರೇಶ್ ವಿರುದ್ಧ ನಾರಾಯಣಸ್ವಾಮಿ ಬೇಸರ

Public TV
2 Min Read

ಕೋಲಾರ: ನಾನು ಜಿಲ್ಲೆಯ ಮಟ್ಟಿಗೆ ಹಿರಿಯ ಶಾಸಕನಾದರು ನನ್ನನ್ನು ಪರಿಗಣಿಸುವುದಿಲ್ಲ. ಜಿಲ್ಲೆಯ ಅಭಿವೃದ್ಧಿ ಸೇರಿದಂತೆ ಪಕ್ಷ ಸಂಘಟನೆ ವಿಚಾರದಲ್ಲಿ ನನ್ನನ್ನು ಉದಾಸೀನ ಮನೋಭಾವದಿಂದ ನೋಡುತ್ತಿದ್ದಾರೆ ಎಂದು ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ (Byrathi Suresh) ವಿರುದ್ಧ ಶಾಸಕ ಹಾಗೂ ಕೆಯುಐಡಿಎಫ್ ಮಂಡಳಿ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ (SN Narayanaswamy) ಬೇಸರ ವ್ಯಕ್ತಪಡಿಸಿದ್ದಾರೆ.

ಕೋಲಾರ (Kolar) ಜಿಲ್ಲೆ ಬಂಗಾರಪೇಟೆಯ (Bangarpet) ಪುರಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ವಿಚಾರದಲ್ಲಿ ನನ್ನ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಜಿಲ್ಲೆಯಲ್ಲಿರುವ ಗುಂಪುಗಳಲ್ಲಿ ಗುರುತಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಕೋಲಾರ ಕಾಂಗ್ರೆಸ್ ಹೊಲಸಾಗಿದೆ. ಇಲ್ಲಿ ಯರ‍್ಯಾರೋ ನಾಯಕರಾಗಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಸಭೆಯಲ್ಲಿ ನಡೆದ ಗಲಾಟೆಯಿಂದ, ತಲೆ ತಗ್ಗಿಸುವಂತಾಗಿದೆ. ಹಿರಿಯ, ಕಿರಿಯ ಶಾಸಕರು ಯಾರೆಂದು ತಿಳಿದು ಆದ್ಯತೆ ನೀಡಬೇಕೆಂದು ಉಸ್ತುವಾರಿ ಸಚಿವ ಬೈರತಿ ಸುರೇಶ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ಅಪ್ರಾಪ್ತರಿಂದ ಫೈರಿಂಗ್‌ – ಓರ್ವ ಸಾವು, ಇಬ್ಬರು ಗಂಭೀರ

ಸದ್ಯಕ್ಕೆ ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಎರಡೂವರೆ ವರ್ಷದ ನಂತರ ನಂಗೆ ಮಂತ್ರಿ ಸ್ಥಾನ ನೀಡುವ ಭರವಸೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ. ವಕ್ಪ್ ಬೋರ್ಡ್ ವಿವಾದ ವಿಚಾರದಲ್ಲಿ ನಾವು ರೈತರ ಪರ ನಿಲ್ಲುತ್ತೇವೆ. ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್‌ಗೆ ರೈತರ ಆಸ್ತಿ ನೀಡಬಾರದು. ಈಗಾಗಲೇ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ನಾಯಕ ತೀಟೆ ರವಿ ಏನೇನೋ ಹೇಳಿಕೆ ನೀಡುತ್ತಿದ್ದು, ಕೇವಲ ರಾಜಕೀಯ ಮಾಡಲು, ಬಿಜೆಪಿ, ಜೆಡಿಎಸ್ ಹೋರಾಟ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದರೆ ತೆಲಂಗಾಣ, ಕರ್ನಾಟಕದಲ್ಲಿ ವಸೂಲಿ ಡಬಲ್ ಆಗಿದೆ: ಮೋದಿ ವಾಗ್ದಾಳಿ

ಇನ್ನು ರಾಜ್ಯ ಕಾಂಗ್ರೆಸ್‌ನಲ್ಲಿ 5 ವರ್ಷದಲ್ಲಿ ಅಧಿಕಾರ ಹಂಚಿಕೆ ವಿಚಾರ ಕುರಿತು ಮಾತನಾಡಿದ ಅವರು, ಅಂತಹ ಯಾವುದೇ ಹಂಚಿಕೆ ಒಪ್ಪಂದವೂ ಆಗಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದರು. 5 ವರ್ಷ ಸಿಎಂ ಆಗಿರ್ತೀನಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅದು ಸಹಜ ಹೇಳಿಕೆ. ಆದರೆ ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: 20 ಮಾರ್ಗಗಳಲ್ಲಿ 2025ರಲ್ಲಿ ಸೀಪ್ಲೇನ್ ಕಾರ್ಯಾಚರಣೆ ಪ್ರಾರಂಭ: ಸ್ಪೈಸ್‌ಜೆಟ್

Share This Article