Tungabhadra Dam | ಡ್ಯಾಂಗೆ ಬೋರ್ಡ್ ಅಧಿಕಾರಿಗಳ ಭೇಟಿ, 33 ಗೇಟ್ ಬದಲಾವಣೆಗೆ ಚಿಂತನೆ

Public TV
2 Min Read

ಕೊಪ್ಪಳ: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಗೇಟ್ ಕಿತ್ತು ಹೋಗಿ ದೊಡ್ಡ ಅನಾಹುತ ನಡೆದಿತ್ತು. ಇದರಿಂದಾಗಿ ಎಚ್ಚೆತ್ತು ಟಿಬಿ ಡ್ಯಾಂ ಬೋರ್ಡ್‌ನಿಂದ ಅಧಿಕಾರಿಗಳು ಭೇಟಿ ನೀಡಿದ್ದು, 33 ಗೇಟ್ ಬದಲಾವಣೆಗೆ ಚಿಂತನೆ ನಡೆದಿದೆ.

ಕೊಪ್ಪಳ (Koppala) ತಾಲೂಕಿನ ಮುನಿರಾಬಾದ್ ಬಳಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅ.10 ರಾತ್ರಿ ಕಿತ್ತು ಹೋಗಿ ನಾಲ್ಕು ಜಿಲ್ಲೆಯ ಜೀವನಾಡಿಗೆ ಕೊಕ್ಕೆ ಬಿದ್ದಿತ್ತು. ಇದರಿಂದಾಗಿ ರೈತರಿಗೆ ಆತಂಕ ಶುರುವಾಗಿತ್ತು. ಕುಡಿಯುವ ನೀರಿಗೂ ಪರದಾಡಬೇಕಲ್ಲ ಎಂದು ಆತಂಕ ಮನೆ ಮಾಡಿತ್ತು, ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತುಹೋಗಿ, ಡ್ಯಾಂ ನೀರು ನದಿ ಪಾಲಾಗುತ್ತಿತ್ತು. ಜೊತೆಗೆ ನೀರನ್ನು ತಡೆಹಿಡಿಯುವುದು ಅನಿವಾರ್ಯದ ಜೊತೆಗೆ ಸವಾಲಿನ ಕೆಲಸವೂ ಕೂಡಾ ಆಗಿತ್ತು. ಜಲಾಶಯ ತಜ್ಞ ಕನ್ನಯ್ಯ ನಾಯ್ಡು ಅವರ ತಂಡ, ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡಿ ನೀರು ನಿಲ್ಲಿಸಿ, ಜನರು ನಿಟ್ಟುಸಿರು ಬಿಡುವಂತೆ ಮಾಡಿ, ಡ್ಯಾಂನಲ್ಲಿನ 60 ಟಿಎಂಸಿ ನೀರನ್ನು ಉಳಿಸಿಕೊಂಡರು. ಆದರೆ ಸದ್ಯ ಈಗ ಡ್ಯಾಂನ ಮುಂದಿನ ಭವಿಷ್ಯವೂ ಸರ್ಕಾರ ಹಾಗೂ ಟಿಬಿ ಬೋರ್ಡ ಮುಂದಿದ್ದು, 33 ಗೇಟ್ ಬದಲಾವಣೆಗೆ ಚಿಂತನೆ ನಡೆದಿದೆ.ಇದನ್ನೂ ಓದಿ: ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್‌ ಕಮಾಲ್‌ – ಭಾರತಕ್ಕೆ ಏನು ಲಾಭ?

19ನೇ ಗೇಟ್ (Gate) ಕಿತ್ತು ಹೋಗುವ ಮೊದಲು ಇಲ್ಲದ ಆತಂಕ ಇದೀಗ ಶುರುವಾಗಿದೆ. 50 ವರ್ಷಕ್ಕೊಮ್ಮೆ ಡ್ಯಾಂ ಗೇಟ್‌ಗಳನ್ನು ಬದಲಾವಣೆ ಮಾಡುವುದು ಅನಿವಾರ್ಯ. ತುಂಗಭದ್ರಾ ಜಲಾಶಯದ ನಿರ್ಮಾಣ ಕಾರ್ಯ 1949ರಲ್ಲಿ ಆರಂಭವಾಗಿತ್ತು. 1954ರಲ್ಲಿ ಡ್ಯಾಂ ಲೋಕಾರ್ಪಣೆಗೊಂಡಿದೆ. ಅಂದರೆ ತುಂಗಭದ್ರಾ ಜಲಾಶಯ ನಿರ್ಮಾಣವಾಗಿ ಬರೋಬ್ಬರಿ 70 ವರ್ಷವಾಗಿದೆ. ಆದರೆ ಡ್ಯಾಂನ ಆಯಸ್ಸುನ್ನು ನೋಡಿದಾಗ, ಅದಕ್ಕಿರುವುದು ಕೇವಲ 30 ವರ್ಷ ಮಾತ್ರ. ಇದೇ ವಿಚಾರವನ್ನು ಇಟ್ಟುಕೊಂಡು ಕನ್ನಯ್ಯ ನಾಯ್ಡು ಕೂಡಾ ಇನ್ನು ಮೂವತ್ತು ವರ್ಷದ ನಂತರ ಡ್ಯಾಂನ್ನು ನಿಷ್ಕ್ರೀಯಗೊಳಿಸಿ ಹೊಸದನ್ನು ನಿರ್ಮಾಣ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದರು. ಹೀಗಾಗಿ ಪರ್ಯಾಯ ಜಲಾಶಯ ನಿರ್ಮಾಣದ ಸಾಧಕ ಭಾದಕಗಳ ಚರ್ಚೆಗಳಾಗುತ್ತಿದ್ದು, ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದೀಗ ಮೇಲಿಂದ ಮೇಲೆ ಜಲಾಶಯಕ್ಕೆ ಆಗಮಿಸುತ್ತಿರುವ ಟಿಬಿ ಡ್ಯಾಂ ಬೋರ್ಡ್ನ ಅಧಿಕಾರಿಗಳು, ಜಲಾಶಯದ 33 ಗೇಟ್‌ಗಳನ್ನು ಯಾವಾಗ ಬದಲಾವಣೆ ಮಾಡಬೇಕು, ಗೇಟ್‌ಗಳನ್ನು ಎಲ್ಲಿ ರೆಡಿ ಮಾಡಿಸಬೇಕು, ಹೊಸ ಮಾದರಿ ಗೇಟ್‌ಗಳು ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ ಜಲಾಶಯ ತುಂಬಿದ್ದರಿಂದ, ಬರುವ ಬೇಸಿಗೆ ಸಮಯದಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗುವುದರಿಂದ ಆಗ ಗೇಟ್‌ಗಳ ಬದಲಾವಣೆಗೆ ಪ್ಲ್ಯಾನ್ ಮಾಡುತ್ತಿದ್ದಾರೆ. ಸದ್ಯ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ತಾಂತ್ರಿಕ ತಜ್ಞರ ತಂಡ ಒಮ್ಮೆ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಇದೀಗ ಡ್ಯಾಂ ಕಾರ್ಯದರ್ಶಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಲಾಶಯಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಆರಂಭಿಸಿದೆ. ಇನ್ನಾದರು ಕೂಡಾ ನಿರ್ಲಕ್ಷ್ಯ ವಹಿಸದೇ, ಬೇಸಿಗೆ ಸಮಯದಲ್ಲಿ ಹೊಸ ಗೇಟ್‌ಗಳ ಅಳವಡಿಕೆ ಕಾರ್ಯಕ್ಕೆ ಬೇಕಾದ ಸಿದ್ಧತೆಯನ್ನು ಈಗನಿಂದಲೇ ಆರಂಭಿಸಬೇಕಿದೆ. 33 ಗೇಟ್‌ಗಳ ಅಳವಡಿಕೆಗೆ ಸಾಕಷ್ಟು ಸಮಯ ಬೇಕಾಗಿರುವುದರಿಂದ, ಈ ನಿಟ್ಟಿನಲ್ಲಿ ಡ್ಯಾಂ ಬೋರ್ಡ್ ತೀವ್ರಗತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ.ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ತಬಲಾ ನಾಣಿ ಪುತ್ರಿ

Share This Article