ರಾಯಚೂರು: ಪ್ರಭಾರಿ ಹುದ್ದೆಯಲ್ಲಿ ಕುಳಿತರೆ ಪಿಸ್ತೂಲ್ ನಿಂದ ಶೂಟ್ ಮಾಡ್ತಿನಿ ಅಂತ ಹಿರಿಯ ಅಧಿಕಾರಿ ತನ್ನ ಕಿರಿಯ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿ ಜೈಲುಪಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಅಮಾನತ್ತಿನಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ವಲಯ ಅರಣ್ಯಾಧಿಕಾರಿ ಸಾಯೀಂದ್ರ ಕುಮಾರ್, ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫಿಸರ್ ಗಂಗಪ್ಪ ಎಂಬವರ ಹಣೆಗೆ ಪಿಸ್ತೂಲ್ ಹಿಡಿದು ಕೊಲೆ ಬೆದರಿಕೆ ಹಾಕಿದ್ದಾರೆ. ಅಧಿಕಾರ ವಹಿಸಿಕೊಂಡರೆ ಶೂಟ್ ಮಾಡ್ತೀನಿ ಅಂತ ಗಂಗಪ್ಪಗೆ ಹೆದರಿಸಿದ್ದಾರೆ.
ಕರ್ತವ್ಯಲೋಪ ಆರೋಪದ ಮೇಲೆ ಅಮಾನತ್ತಾಗಿದ್ದ ಸಾಯೀಂದ್ರ ಕುಮಾರ್ ಸ್ಥಾನದ ಹೊಣೆಯನ್ನ ಹಿರಿಯ ಅಧಿಕಾರಿಗಳು ಗಂಗಪ್ಪನಿಗೆ ನೀಡಿದ್ದರು. ಅಧಿಕಾರಿಗಳ ಆದೇಶದಂತೆ ವಲಯ ಅರಣ್ಯಾಧಿಕಾರಿಗಳ ಕುರ್ಚಿಯಲ್ಲಿ ಕುಳಿತ ಗಂಗಪ್ಪನನ್ನ ಥಳಿಸಿ ಪಿಸ್ತೂಲ್ ಹಿಡಿದು ಸಾಯೀಂದ್ರ ಕುಮಾರ್ ಹೆದರಿಸಿದ್ದಾರೆ. ಕಚೇರಿಯಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಾಯೀಂದ್ರ ಕುಮಾರ್ ವಿರುದ್ಧ ಶಸ್ತ್ರಾಸ್ತ್ರ ಬಳಕೆ ಹಾಗೂ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಾಯಿಂದ್ರ ಅವರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದೇ ವೇಳೆ ಸಾಯೀಂದ್ರ ಕುಮಾರ್, ಗಂಗಪ್ಪ ವಿರುದ್ಧ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳ ಬಳಕೆ ಆರೋಪಡಿ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.