ಜಾತಿಗಣತಿ ವರದಿ ಆಧಾರದ ಮೇಲೆ ಹಳ್ಳಿಕಾರ್ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇವೆ: ಸಿದ್ದರಾಮಯ್ಯ

Public TV
3 Min Read

– 3ಎ ಯಿಂದ ಪ್ರವರ್ಗ-1ಕ್ಕೆ ಸೇರಿಸಲು ಕೂಡಲೇ ಕ್ರಮ ಕೈಗೊಳ್ಳುತ್ತೇನೆಂದ ಸಿಎಂ

ಬೆಂಗಳೂರು: ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಕೊಟ್ಟಿದೆ. ಈ ಮೀಸಲಾತಿಗೆ ನೀವು ಬಂದರೆ ನಿಮಗೂ ಈ ಸೌಲಭ್ಯ ಸಿಗುತ್ತದೆ. ಇಲ್ಲದಿದ್ದರೇ ಜಾತಿಗಣತಿ ವರದಿ ಆಧಾರದ ಮೇಲೆ ನ್ಯಾಯ ಒದಗಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದರು.

ನಗರದ ಮೈಸೂರು ರಸ್ತೆಯ (Mysuru Road) ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಹಳ್ಳಿ ಕಾರ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಭಾಗವಹಿಸಿದ್ದರು. ಸಮಾವೇಶದಲ್ಲಿ ಹಳ್ಳಿಕಾರ್ ಸಮುದಾಯದ ಮುಖಂಡರು ತಮ್ಮ ಸಮುದಾಯವನ್ನು 3ಎ ಯಿಂದ ಪ್ರವರ್ಗ-1ಕ್ಕೆ ಸೇರಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಸಿಎಂ, ಡಿಸಿಎಂ ಸ್ಪಂದಿಸಿದರು.ಇದನ್ನೂ ಓದಿ:ದೀಪಾವಳಿ ಹಬ್ಬಕ್ಕೆಂದು ಊರಿಗೆ ತೆರಳುವಾಗ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ – 10 ಮಂದಿಗೆ ಗಾಯ

ಬಳಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, 1931ರ ಬಳಿಕ ನಾನು ಜಾತಿಗಣತಿ ವರದಿಗೆ ಆದೇಶ ಮಾಡಿದ್ದೆ. ನಿಮಗೆ ನಾವು ಜಾತಿಗಣತಿ ಆಧಾರದ ಮೇಲೆ ನ್ಯಾಯ ಒದಗಿಸುತ್ತೇವೆ. ನಿಮ್ಮನ್ನ 3ಎಗೆ ಸೇರಿಸುವುದು ಸಮಂಜಸವಲ್ಲ. ಕೇವಲ 65 ಸಾವಿರ ಜನರು ಇರುವ ಹಳ್ಳಿ ಕಾರ್ ಸಮುದಾಯದಲ್ಲಿ ಒಬ್ಬರೇ ಒಬ್ಬರು ಐಎಎಸ್, ಐಪಿಎಸ್ ಅಧಿಕಾರಿಗಳಿಲ್ಲ. ಹೀಗಾಗಿ ನಾನು ನಿಮ್ಮ ಪರವಾಗಿ ಸಹಾನುಭೂತಿಯಿಂದ ಇದ್ದೇನೆ. ಸಾಮಾಜಿಕ ನ್ಯಾಯದಿಂದ ನಾವು ಹಿಂದೆ ಬೀಳಲ್ಲ ಎಂದು ಮನವಿಗೆ ಪ್ರತಿಕ್ರಿಯಿಸಿದರು.

ಹಳ್ಳಿಕಾರ್ ಸಮುದಾಯ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಪಶುಸಂಗೋಪನೆ ಈ ಸಮುದಾಯದ ಮೂಲ ಕುಲಕಸುಬಾಗಿದೆ. ಸಮುದಾಯಗಳಿಗೆ ವಿದ್ಯೆ, ಶಿಕ್ಷಣ ಪರಿಣಾಮಕಾರಿಯಾದ ಅಸ್ತ್ರ. ಶಿಕ್ಷಿತರಾದಾಗ ಮಾತ್ರ ತಮ್ಮ ಪಾಲನ್ನು ಪಡೆಯಲು ಸಾಧ್ಯ. ಹಳ್ಳಿಕಾರ್ ಸಮುದಾಯದಲ್ಲಿ ಐಎಎಸ್, ಐಪಿಎಸ್ ಆದವರೂ ಯಾರೂ ಇಲ್ಲ. ಇದನ್ನು ನೋಡಿದಾಗ ಶೈಕ್ಷಣಿಕವಾಗಿ ಸಮುದಾಯ ತೀರಾ ಹಿಂದುಳಿದಿದೆ. ಶೂದ್ರ ಜನಾಂಗ ಶತ ಶತಮಾನಗಳ ಕಾಲ ಅಕ್ಷರ ಸಂಸ್ಕೃತಿಯಿಂದ ಹಿಂದುಳಿದಿವೆ ಎಂದರು.

3ಎ ನಲ್ಲಿರುವ ಜನಾಂಗವನ್ನು ಪ್ರವರ್ಗ ಒಂದಕ್ಕೆ ಸೇರಿಸುವ ಪ್ರಸ್ತಾಪವಿದೆ. ಇವತ್ತು ಜಾತಿ ಜನಗಣತಿ (Caste Census) ಮಾಡುವ ಅಗತ್ಯವಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಜನಗಣತಿ ಮಾಡಿಸಿದ್ದೆ. ಅವರು ಇತ್ತೀಚೆಗೆ ವರದಿ ಕೊಟ್ಟಿದ್ದಾರೆ. ಆ ವರದಿಯನ್ನು ಇನ್ನೂ ನಾನು ನೋಡಿಲ್ಲ. ಆ ವರದಿ ನೋಡಿದರೆ ಮಾತ್ರ ಯಾವ ಜನಾಂಗ ಸಾಮಾಜಿಕ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.

ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಕೆ.ನಾಗರಾಜ್ ಹಳ್ಳಿಕಾರ್ ಸಮುದಾಯದ ಅಧ್ಯಕ್ಷರಲ್ಲ. ಬೆಂಗಳೂರಿನ ಅನೇಕ ನಾಯಕರನ್ನು ತಯಾರು ಮಾಡಿದ್ದಾರೆ. ಅವರನ್ನು ನಾವು ಎಂಎಲ್‌ಸಿಯಾಗಿ ಮಾಡಿದ್ದೇವು. ಆಗ ನನಗೆ ಬೇಡ ಎಂದು ಅಧಿಕಾರ ತ್ಯಾಗ ಮಾಡಿದರು. 80 ವರ್ಷ ಆದಮೇಲೆ ಈ ಸಮಾವೇಶ ನಡೆಯುತ್ತಿದೆ. ಹಳ್ಳಿಕಾರರು ಕೃಷ್ಣ ಕುಲಕ್ಕೆ ಸೇರಿದವರು. ಸಿಎಂ ನಿಮ್ಮಲ್ಲರ ಪರವಾಗಿರುವ ನಾಯಕ. ಸಮುದಾಯದ ಬೇಡಿಕೆಯ ಕುರಿತು ಪರಿಶೀಲನೆ ನಡೆಸುತ್ತೇವೆ. ನಿಮ್ಮ ಶ್ರಮ, ಸಮಾಜದ ಫಲ ಯಶಸ್ಸು ಕಾಣಬೇಕಾದರೆ ಧರ್ಮರಾಯನ ರೀತಿ ಧರ್ಮವಿರಬೇಕು. ಕೃಷ್ಣನ ರೀತಿ ತಂತ್ರವಿರಬೇಕು ಆಗ ಯಶಸ್ಸು ಗಳಿಸಲು ಸಾಧ್ಯ. ಕೃಷಿಕ, ಕಾರ್ಮಿಕ, ಶಿಕ್ಷಕ, ಸೈನಿಕ ಸಮಾಜದಲ್ಲಿ ನಾಲ್ಕು ವರ್ಗವಿದೆ. ಹಳ್ಳಿಕಾರ ಸಮುದಾಯ ಕುಲದ ಜೊತೆಗೆ ಈ ಸರ್ಕಾರವಿದೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ರವೀಂದ್ರ ಸಂಗೀತದ ಬದಲಿಗೆ ಬಂಗಾಳದಲ್ಲಿ ಬಾಂಬ್ ಸದ್ದು ಕೇಳುತ್ತಿದೆ: ದೀದಿ ವಿರುದ್ಧ ಅಮಿತ್ ಶಾ ಕಿಡಿ

Share This Article