ಬಾಬುಸಾಬ್ ಪಾಳ್ಯ ಕಟ್ಟಡ ದುರಂತಕ್ಕೆ ಟ್ವಿಸ್ಟ್ – ಹಳೇ ಕಟ್ಟಡದಲ್ಲಿ ಹೊಸ ಬಿಲ್ಡಿಂಗ್ ನಿರ್ಮಾಣ

By
2 Min Read

– 2 ತಿಂಗಳ ಹಿಂದೆಯೇ ನಿಯಮ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡಿದ್ದ ಸ್ಥಳೀಯರು

ಬೆಂಗಳೂರು: ಹೆಣ್ಣೂರು ಬಳಿಯ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ (Babusapalya Building Collapse) ಪ್ರಕರಣದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದ್ದು, ಇನ್ನೂ ಇಬ್ಬರಿಗಾಗಿ ಹುಡುಕಾಟ ನಡೆದಿದೆ. ಈ ಮಧ್ಯೆ ಬಿಬಿಎಂಪಿ (BBMP) ಅಧಿಕಾರಿಗಳು, ಕಟ್ಟಡದ ಮಾಲೀಕನ ನಿರ್ಲಕ್ಷ್ಯದ ವಿಚಾರಗಳು ಒಂದೊಂದೇ ಹೊರಗೆ ಬರುತ್ತಿದೆ.

ಬಾಬುಸಾಬ್ ಪಾಳ್ಯ ಕಟ್ಟಡ ದುರಂತದಲ್ಲಿ ಈಗಾಗಲೇ ಎಂಟು ಜನ ದಾರುಣಾವಾಗಿ ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಅವಶೇಷಗಳ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಡಿಸಿಎಂ, ಸಚಿವರು, ಶಾಸಕರು, ಲೋಕಾಯುಕ್ತ ನ್ಯಾಯಾಧೀಶರು ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಮಾಲೀಕನ ಕಳಪೆ ಕಾಮಗಾರಿ, ನಿಯಮ ಉಲ್ಲಂಘನೆ ಬಗ್ಗೆ ಕ್ರಮ ಕೈಗೊಳ್ಳುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಆಯುಕ್ತರು, ಸೇರಿದಂತೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ ಇಲ್ಲಿನ ಸ್ಥಳೀಯರು ಪತ್ರ ಬರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಬಿ ಖಾತಾ ಇರುವ ಜಾಗದಲ್ಲಿ ಆರು ಅಂತಸ್ತಿನ ಕಟ್ಟಡ ಕಟ್ಟುತ್ತಿರೋದು, ಕಳಪೆ ಕಾಮಗಾರಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಸ್ಥಳೀಯರು ಪತ್ರ ಬರೆದು ಎಚ್ಚರಿಸಿದ್ದಾರೆ. ಆದರೆ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ – ಇಂದು ಮಧ್ಯಾಹ್ನ ತೆರೆಯಲಿದೆ ಗರ್ಭಗುಡಿ ಬಾಗಿಲು

ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ, ಕಳೆದ ಎರಡು ವರ್ಷಗಳ ಹಿಂದೆ ಬಿ ಖಾತಾ ಜಾಗದಲ್ಲಿ 40-60 ಅಡಿಯ ಒಂದು ಅಂತಸ್ತಿನ ಬಿಲ್ಡಿಂಗ್ ಖರೀದಿ ಮಾಡಿದ್ದಾರೆ. ಇದೇ ವೇಳೆ ಕಂಟ್ರಾಕ್ಟರ್ ಈ ಕಟ್ಟಡವನ್ನು ನಾನೇ ಕಟ್ಟಿರೋದು, ಕಟ್ಟಡ ತುಂಬಾ ಗಟ್ಟಿಯಾಗಿದೆ ಎಂದು ಮಾಲೀಕನಿಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಹಳೇ ಕಟ್ಟಡದ ಮೇಲೆಯೇ, ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟುವ ಪ್ಲಾನ್ ಮಾಡಿದ್ದಾರೆ. ಕಟ್ಟಡ ಕಟ್ಟೋಕೆ ಶುರು ಮಾಡಿದ ಬಳಿಕ ನಾಲ್ಕು ಅಂತಸ್ತು ಹೋಗಿ ಆರು ಅಂತಸ್ತು ಕಟ್ಟಿದ್ದಾರೆ. ಅಪಾರ್ಟ್‌ಮೆಂಟ್ ಅಂತಾ ಶುರುವಾಗಿ ಪಿಜಿ ಮಾಡುವ ಪ್ಲಾನ್ ಇತ್ತು ಎಂದು ತಿಳಿದುಬಂದಿದೆ. ಮಾಲೀಕ ಮುನಿರಾಜು ರೆಡ್ಡಿ, ಕಂಟ್ರಾಕ್ಟರ್ ಮುನಿರಾಜುಗೆ ಸಂಪೂರ್ಣ ಜವಾಬ್ದಾರಿ ನೀಡಿ ಬೇಕಾಬಿಟ್ಟಿ ಕಟ್ಟಡ ನಿರ್ಮಿಸಿರೋದು ಅವಘಡಕ್ಕೆ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಟ್ಟಡ ದುರಂತ – ಮೂವರು ಅರೆಸ್ಟ್‌

ಸದ್ಯ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಾಲೀಕ ಮುನಿರಾಜು ರೆಡ್ಡಿ, ಮಗ ಭುವನ್ ರೆಡ್ಡಿ, ಕಂಟ್ರಾಕ್ಟರ್ ಮುನಿರಾಜುವನ್ನು ಬಂಧಿಸಲಾಗಿದೆ. ಮತ್ತೊಂದು ಕಡೆ ಸ್ಥಳೀಯ ಎಇಇಯನ್ನು ಅಮಾನತು ಮಾಡಲಾಗಿದೆ. ಆದರೆ ಅಧಿಕಾರಿಗಳು, ಮಾಲೀಕರ ಹಣದಾಸೆ, ನಿರ್ಲಕ್ಷ್ಯಕ್ಕೆ ಜೀವನ ಅರಸಿ ದೂರದ ಊರುಗಳಿಂದ ಬಂದಿದ್ದ ಅಮಾಯಕ ಜೀವಗಳು ಬಲಿಯಾಗಿರೋದು ಮಾತ್ರ ದುರಂತವೇ ಸರಿ.‌ ಇದನ್ನೂ ಓದಿ: ಹಬ್ಬಕ್ಕೆ ಬಂದಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವು?

Share This Article