Dasara Special | ಸರಸ್ವತಿ ಪೂಜೆಯ ಮಹತ್ವ ಏನು?

Public TV
1 Min Read

ಮಗೆ ಬೇಕಾದ ಎಲ್ಲ ವಿದ್ಯೆಗಳನ್ನೂ ದಯಪಾಲಿಸುವವ ದೇವತೆ ಸರಸ್ವತಿ. ಈ ಕಾರಣಕ್ಕೆ ನವರಾತ್ರಿಯ ಸಂದರ್ಭದಲ್ಲಿ ಶಾರದಾ ಪೂಜೆ ಅಥವಾ ಸರಸ್ವತಿ ಪೂಜೆಗೆ (Saraswathi Pooja) ವಿಶೇಷ ಮಹತ್ವ. ನವರಾತ್ರಿ (Navaratri) ಹಬ್ಬದ ಸಪ್ತಮಿಯಿಂದ ಸರಸ್ವತಿ ದೇವಿಯ ಆರಾಧನೆಯು ಆರಂಭವಾಗುತ್ತದೆ.

ಯಾ ಕುಂದೇಂದು ತುಷಾರಹಾರಧವಳಾ ಯಾ ಶುಭ್ರವಸ್ತ್ರಾವೃತಾ
ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ ।
ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ

ಸರಸ್ವತಿ ಜ್ಞಾನವನ್ನು (Knowledge) ಕೊಡುವವಳು, ನಮಗೆ ಬುದ್ಧಿವಂತಿಕೆ, ಕಲಿಕೆ ಮತ್ತು ಬುದ್ಧಿಶಕ್ತಿಯನ್ನು ಅನುಗ್ರಹಿಸುತ್ತಾಳೆ. ಅಷ್ಟೇ ಅಲ್ಲದೇ ಆಕೆ ʼಕಾಮರೂಪಿಣಿ’ಯೂ ಹೌದು, ತನಗೆ ಬೇಕಾದ ರೂಪವನ್ನು ಧರಿಸಬಲ್ಲವಳು ಎಂದರ್ಥ. ಬರಿ ವಿದ್ಯೆ ಸಿಕ್ಕಿದರೆ ಪ್ರಯೋಜನವಿಲ್ಲ, ಅದನ್ನು ಸರಿಯಾಗಿ ಬಳಸಲು ಬುದ್ಧಿಯೂ ಬೇಕು. ಇಂಥ ಬುದ್ಧಿಯನ್ನು ಕೊಡುವ ದೇವತೆ ಸರಸ್ವತಿ. ಇದನ್ನೂ ಓದಿ: Mysuru Dasara | ನಾಡಿಗೆ ಬಂದು ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್‌ ಅಭಿಮನ್ಯು & ಟೀಂ

ಹಿಂದೂ ಧರ್ಮದಲ್ಲಿ ಸರಸ್ವತಿ ದೇವಿಯನ್ನು ಪೂಜಿಸಿದರೆ ಜ್ಞಾನ ಸಿಗುತ್ತದೆ ಎಂಬ ನಂಬಿಕೆ. ಈ ಕಾರಣಕ್ಕೆ ಮನೆಗಳಲ್ಲಿ ಮತ್ತು ವಿದ್ಯಾಸಂಸ್ಥೆಗಳಲ್ಲಿ ಸರಸ್ವತಿ ಪೂಜೆ ಮಾಡಲಾಗುತ್ತದೆ. ಈ ಶುಭ ದಿನ ಅಕ್ಷರ ಅಭ್ಯಾಸ ಮಾಡಿದ ಮಗು ಮುಂದೆ ವಿದ್ಯಾವಂತನಾಗಿ, ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳುತ್ತದೆ ಎಂಬ ನಂಬಿಕೆಯಿದೆ.

ಸಾಧಾರಣವಾಗಿ ಮಕ್ಕಳ ಬೆಳವಣಿಗೆ ಅವರು ಆಲೋಚನಾ ಶೈಲಿಯನ್ನು ಗಮನದಲ್ಲಿಟ್ಟುಕೊಂಡು 2 ವರ್ಷದ ನಂತರ 4 ವರ್ಷದೊಳಗಿನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಅಕ್ಷರಾಭ್ಯಾಸ ಎಂದರೆ ಓದು, ಬರಹದ ಆರಂಭ. ಈ ವಿದ್ಯಾರಂಭವನ್ನು ಮನೆ, ಶಾಲೆ ಅಥವಾ ದೇವಸ್ಥಾನದಲ್ಲಾದರೂ ಮಾಡಬಹುದು.

ಜ್ಞಾನ, ಬುದ್ಧಿವಂತಿಕೆ ಮತ್ತು ಕಲೆಗಳ ದೇವತೆಯಾಗಿರುವ ಸರಸ್ವತಿ ವಾಹನ ಹಂಸ. ಶಿಸ್ತು ಮತ್ತು ಶುದ್ಧತೆಯ ಪ್ರತೀಕ ಹಂಸ ಎನ್ನಲಾಗುತ್ತದೆ. ಸರಸ್ವತಿ ಹರಿಯುವ ನೀರಿನೊಂದಿಗೆ ಹಂಸದಲ್ಲಿ ಕುಳಿತುಕೊಂಡಿದ್ದಾಳೆ. ನೀರು ಶುದ್ಧತೆಯ ಸಂಕೇತ. ಎಷ್ಟೇ ಮಲೀನವಾದರೂ ನೀರು ಹರಿಯುತ್ತಲೇ ಅದನ್ನು ಶುದ್ಧ ಮಾಡುತ್ತದೆ. ಹೀಗಾಗಿ ಇಲ್ಲಿ ನೀರನ್ನು ಆಲೋಚನೆ ಮತ್ತು ಜ್ಞಾನದ ಶುದ್ಧತೆಯನ್ನು ಸಾಧಿಸುವ ಸಾಧನವಾಗಿ ಅರ್ಥೈಸಿಕೊಳ್ಳಬಹುದು.

Share This Article