ನಾನೇ ಜಯಲಲಿತಾರ ಮಗ, ಅವರ ಆಸ್ತಿಗೆ ನಾನೇ ವಾರಸ್ದಾರ- ಪ್ರತ್ಯಕ್ಷನಾದ ಅಮ್ಮನ ಮಗ!

Public TV
1 Min Read

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮೃತಪಟ್ಟು ನಾಲ್ಕು ತಿಂಗಳಾಗುತ್ತಾ ಬಂದರೂ ಅವರನ್ನೇ ಕೇಂದ್ರೀಕರಿಸಿಕೊಂಡು ದಿನಕ್ಕೊಂದು ವಿವಾದಗಳು ಎದ್ದೇಳುತ್ತಿವೆ. ಈಗ ನಾನೇ ಜಯಲಲಿತಾ ಅವರ ಮಗ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಮುಂದೆ ಬಂದಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಂದೆ ದೂರನ್ನು ದಾಖಲಿಸಿದ್ದಾರೆ.

ಈರೋಡ್ ಮೂಲದ ಕೃಷ್ಣಮೂರ್ತಿಯೇ ಆ ವ್ಯಕ್ತಿ. ಜಯಲಲಿತಾ ಅವರ ಮಗನಾಗಿರುವ ನಾನು ಅಮ್ಮಾ ಅವರ ಸ್ನೇಹಿತೆ ವನಿತಾಮಣಿ ಅವರ ಮನೆಯಲ್ಲಿ ವಾಸವಾಗಿದ್ದೇನೆ. ನನ್ನ ಜೊತೆಗೆ ನನ್ನನ್ನು ದತ್ತು ಪಡೆದಿರುವ ಹೆತ್ತವರೂ ಇದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್ 14ರಂದು ನಾನು ಚೆನ್ನೈನ ಪೋಯಸ್ ಗಾರ್ಡನ್‍ನಲ್ಲಿರುವ ಜಯಾ ಅವರ ಮನೆಗೆ ಹೋಗಿದ್ದೆ. ಅಮ್ಮಾ ಅವರ ಜೊತೆಗೆ ನಾಲ್ಕು ದಿನ ತಂಗಿದ್ದೆ ಅಂತ ಕೃಷ್ಣಮೂರ್ತಿ ಹೇಳಿದ್ದಾರೆ.

ನನ್ನನ್ನು ತಮ್ಮ ಮಗ ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಜಯಲಲಿತಾ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಜಯಲಲಿತಾ ಹಾಗೂ ಶಶಿಕಲಾರ ನಡುವೆ ಜಗಳ ನಡೆದಿತ್ತು. ಸೆಪ್ಟೆಂಬರ್ 22ರಂದು ನಡೆದ ಈ ಗಲಾಟೆಯಲ್ಲಿ ಶಶಿಕಲಾ ಜಯಾರನ್ನು ಮಹಡಿಯಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಕೃಷ್ಣಮೂರ್ತಿ ಆರೋಪಿಸಿದ್ದಾರೆ.

ನನಗೆ ಜೀವಬೆದರಿಕೆ ಇತ್ತು. ಆದ್ರೆ ಸತ್ಯ ಹೇಳಲು ಧೈರ್ಯ ಮಾಡಿದ್ದೇನೆ. ಜಯಲಲಿತಾ ಅವರ ಮಗನಾಗಿರುವ ಕಾರಣ ಅವರ ಆಸ್ತಿಗಳಿಗೆಲ್ಲಾ ನಾನೇ ನಿಜವಾದ ವಾರಸ್ದಾರ ಎಂದು ಕೃಷ್ಣಮೂರ್ತಿ ವಾದಿಸಿದ್ದಾರೆ.

ಈ ಹಿಂದೆ ಪ್ರಿಯಾ ಲಕ್ಷ್ಮಿ ಎಂಬಾಕೆ ನಾನು ಜಯಲಲಿತಾ ಮತ್ತು ಎಂಜಿರ್ ಅವರ ಪುತ್ರಿ ಎಂದು ಹೇಳಿಕೊಂಡು ಮುಂದೆ ಬಂದಿದ್ದರು. ಆದ್ರೆ ಅಕೆಯ ಹೇಳಿಕೆ ಸುಳ್ಳು ಎಂದು ಪತ್ತೆ ಮಾಡಿದ ಪೊಲೀಸರು ವಂಚನೆ ಆರೋಪದಡಿ ಆಕೆಯನ್ನು ಬಂಧಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *