ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಇಡೀ ರಾಜ್ಯ ಬರದ ಬೇಗೆಯಲ್ಲಿ ಸುಟ್ಟು ಹೋಗಿದೆ. ಹೀಗಿದ್ರೂ, ನಮ್ಮನ್ನಾಳುವ ಜನ ಪ್ರತಿನಿಧಿಗಳ ಶೋಕಿಗೆ ಮಾತ್ರ ಬರವಿಲ್ಲ. ಬರಗಾಲದಲ್ಲಿ ಜನ ಜಾನುವಾರು ಸಾಯ್ತಿದ್ರು ವಿಧಾನ ಪರಿಷತ್ ಸದಸ್ಯರಿಗೆ ಓಡಾಡೋಕೆ ಹೊಸ ಕಾರುಗಳನ್ನ ಖರೀದಿ ಮಾಡಲಾಗಿದೆ.
ಇತ್ತೀಚೆಗೆ ಸುಮಾರು 87 ಲಕ್ಷ ರೂ. ಹಣ ಖರ್ಚು ಮಾಡಿ 13 ಹೊಸ ಸ್ವಿಫ್ಟ್ ಡಿಸೈರ್ ಕಾರ್ಗಳನ್ನು ಖರೀದಿ ಮಾಡಲಾಗಿದೆ. ಸದ್ಯ ವಿಧಾನ ಪರಿಷತ್ ಸೇವೆಗೆ ಸಭಾಪತಿಗಳು, ಸಭಾ ನಾಯಕರು, ವಿಪಕ್ಷ ನಾಯಕರು, ಸಚೇತಕರ ಕಾರುಗಳನ್ನು ಹೊರತುಪಡಿಸಿ 31 ಕಾರುಗಳು ಇವೆ. ಸದ್ಯ ಅವೆಲ್ಲ ಚೆನ್ನಾಗಿಯೇ ಓಡ್ತಿವೆ. ಹೀಗಿದ್ರೂ 13 ಹೊಸ ಕಾರುಗಳನ್ನ ಖರೀದಿಸಲಾಗಿದೆ. ಖರೀದಿಯಲ್ಲೂ ಅವ್ಯವಹಾರದ ಆರೋಪ ಕೇಳಿ ಬಂದಿದ್ದು ಈ ಮಾಡೆಲ್ ಕಾರಿನ ಬೆಲೆ 6 ಲಕ್ಷದಷ್ಟು ಇದೆ. ಆದ್ರೆ ಅಧಿಕಾರಿಗಳೇ ನೀಡಿರುವ ಮಾಹಿತಿ ಪ್ರಕಾರ ಒಂದು ಕಾರಿಗೆ ಸುಮಾರು 6.70 ಲಕ್ಷ ಖರ್ಚು ಮಾಡಲಾಗಿದೆ. ಅಂದರೆ ಒಂದು ಕಾರಿನ ಮೇಲೆ 70 ಸಾವಿರದಷ್ಟು ಹೆಚ್ಚು ಹಣ ನೀಡಲಾಗಿದೆ.
ಕಾರುಗಳು ಸರಿಯಿದ್ರೂ ಅಥವಾ ಸಣ್ಣ ಪುಟ್ಟ ರಿಪೇರಿ ಇದ್ರೂ ಅದನ್ನು ಸರಿಪಡಿಸುವ ಬದಲಾಗಿ ಹೊಸ ಕಾರು ಖರೀದಿಸೋದು ಎಷ್ಟು ಸರಿ? ಬರದ ಹೊಡೆತಕ್ಕೆ ತತ್ತರಿಸಿರೋ ಇಂತಹ ಸಮಯದಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಪ್ರಜ್ಞಾವಂತ ನಾಗರಿಕರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.