ಸಂಸ್ಕೃತ ಬರದಿದ್ರೆ ದೇವಲೋಕಕ್ಕೆ ವೀಸಾ ಇಲ್ಲ: ಚರ್ಚೆಗೆ ಗ್ರಾಸವಾದ ಪುತ್ತಿಗೆ ಶ್ರೀ ಹೇಳಿಕೆ

Public TV
1 Min Read

– ಪಿತಾದಿಂದ ಫಾದರ್, ಮಾತಾದಿಂದ ಮದರ್
– ಇಂಗ್ಲೀಷ್ ಅಂತರಾಷ್ಟ್ರೀಯ, ಸಂಸ್ಕೃತ ಅಂತರ್‌ಲೋಕದ ಭಾಷೆ

ಉಡುಪಿ: ಸ್ವರ್ಗ ಲೋಕಕ್ಕೆ ಹೋಗಬೇಕಾದರೆ ಸಂಸ್ಕೃತ (Sanskrit) ಕಲಿಯಬೇಕು ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ (Sugunendra Theertha Swamiji) ಹೇಳಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಮಾಸೋತ್ಸವ ಸಮಾರೋಪದ ವೇಳೆ ಸಂಸ್ಕೃತ ಭಾಷೆಯಲ್ಲಿ ಮಾತನಾಡಿದ ಅವರು, ಸಂಸ್ಕೃತ ಪವಿತ್ರ ಶ್ರೇಷ್ಠ ವಿಶ್ವಭಾಷೆಯಾಗಿದೆ. ದೇವರ ಎಲ್ಲಾ ಶ್ಲೋಕಗಳು, ಪೂಜೆಗಳು ಸಂಸ್ಕೃತ ಭಾಷೆಯಲ್ಲಿ ನಡೆಯುತ್ತದೆ. ಒಂದು ತಿಂಗಳುಗಳ ಕಾಲ ನಡೆದ ಶ್ರೀ ಕೃಷ್ಣ ಮಹಾಸ್ವೋತ್ಸವವನ್ನು ದೇವರಿಗೆ ಅರ್ಪಣೆ ಮಾಡಿದ್ದೇವೆ. ಶ್ರೀಕೃಷ್ಣನ ಮಹೋತ್ಸವದ ಸಂದರ್ಭವಾದ ಕಾರಣ ನಾನು ದೇವ ಭಾಷೆ ಸಂಸ್ಕೃತದಲ್ಲಿ ಮಾತನಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ. ತುಳು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳು ಹುಟ್ಟಿಕೊಂಡಿರುವುದೇ ಸಂಸ್ಕೃತದಿಂದ. ಕೇವಲ ಭಾರತೀಯ ಭಾಷೆಗಳಿಗೆ ಮಾತ್ರ ಸಂಸ್ಕೃತ ಮೂಲವಲ್ಲ. ಆಂಗ್ಲ ಭಾಷೆಗಳಿಗೂ ಮೂಲ ಸಂಸ್ಕೃತವೇ ಆಗಿದೆ. ಪಿತಾದಿಂದ ಫಾದರ್, ಮಾತಾದಿಂದ ಮದರ್ ಹುಟ್ಟಿಕೊಂಡಿದೆ. ಸಮಗ್ರವು ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಸಂಸ್ಕೃತ ಭಾಷೆಯನ್ನು ಹೊರತುಪಡಿಸಿ ಇತರ ಭಾಷೆಗಳು ಪ್ರಾದೇಶಿಕ ಭಾಷೆಗಳಾಗಿವೆ. ಕರ್ನಾಟಕದಲ್ಲಿ ಕನ್ನಡ, ದೇಶದಲ್ಲಿ ಹಿಂದಿ, ವಿದೇಶದಲ್ಲಿ ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ ಹಾಗೂ ಸಂಸ್ಕೃತ ಅಂತರ್‍ಲೋಕದ ಭಾಷೆ. ದೇವಲೋಕದಲ್ಲಿ ವ್ಯವಹರಿಸುವುದು ಸಂಸ್ಕೃತ ಭಾಷೆಯಲ್ಲಿ. ಸಂಸ್ಕೃತ ದೇವ ಭಾಷೆ. ಸಂಸ್ಕೃತ ಭಾಷೆ ತಿಳಿಯದಿದ್ದರೆ ದೇವಲೋಕಕ್ಕೆ ವೀಸಾ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಸ್ವಾಮೀಜಿಗಳ ಭಾಷಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳಾಗುತ್ತಿವೆ.

Share This Article