ಬರದ ನಡುವೆ ಮಲಪ್ರಭಾ ಕಾಲುವೆ ಒಡೆದು ವ್ಯರ್ಥವಾಗಿ ಹರಿದ ಜೀವಜಲ

Public TV
2 Min Read

ಗದಗ್: ಜಿಲ್ಲೆಯ ಬಳಗಾನೂರು ಗ್ರಾಮದ ಬಳಿ ಇರುವ ಮಲಪ್ರಭಾ ನದಿಯ ಬಲದಂಡೆ ಕಾಲುವೆ ಒಡೆದು ಜೀವಜಲ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಜಿಲ್ಲೆಯಲ್ಲಿ ಒಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದ್ದು, ಮತ್ತೊಂದೆಡೆ ಅದೇ ಜಿಲ್ಲೆಯಲ್ಲಿ ಅಧಿಕಾರಿಗಳ ನಿಷ್ಕಾಳಜಿಗೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಹಳ್ಳ ಸೇರಿದೆ. ಇದರಿಂದ ಜನರ ನೀರಿನ ಬವಣೆ ನೀಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಹಳ್ಳ ಹಿಡಿದಿದೆ.

ಮಲಪ್ರಭಾ ನದಿಯಿಂದ 350 ಕ್ಯೂಸೆಕ್ ನೀರು ಹರಿಬಿಡಲಾಗಿತ್ತು. ಆದ್ರೆ ಬಿಟ್ಟ ನೀರು ಪೋಲಾಗಿ ಹಳ್ಳಹಿಡಿದಿದೆ. ಇದ್ರಿಂದ ಕಾಲುವೆ ಮೂಲಕ ಹರಿದು ರೋಣ ಹಾಗೂ ನರಗುಂದ ತಾಲೂಕಿನ 16 ಗ್ರಾಮಗಳ ಜನರ ನೀರಿನ ದಾಹ ನೀಗಿಸಬೇಕಿದ್ದ ಯೋಜನೆಗೆ ಹಿನ್ನಡೆಯಾಗಿದೆ. ಎರಡು ತಿಂಗಳ ಹಿಂದಷ್ಟೆ ಇದೇ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಇದೀಗ ಮತ್ತೆ ಅದೇ ಕಾಲುವೆ ಒಡೆದಿದ್ದು, ಕಳಪೆ ಕಾಮಗಾರಿ ಇದಕ್ಕೆ ಕಾರಣ ಅಂತ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ. ಒಂದೆಡೆ ನೀರು ತರದೆ ಹೋದ್ರೆ ಪಾಲಕರು ಬೈತಾರೆ, ಪಾಲಕರು ಬೈತಾರೆ ಅಂತ ನೀರಿಗೆ ಹೋದ್ರೆ ಸ್ಕೂಲ್ ಮೇಷ್ಟರು ಬೈತಾರೆ ಎಂದು ಶಾಲಾ ಮಕ್ಕಳು ಕಣ್ಣೀರಿಡುತ್ತಿದ್ದಾರೆ. 2 ತಿಂಗಳ ಹಿಂದಷ್ಟೆ ಒಡೆದ ಕಾಲುವೆಯ ದುರಸ್ಥಿಗೆ ಸಣ್ಣನೀರಾವರಿ ಇಲಾಖೆ ಲಕ್ಷಾಂತರ ರೂ. ಹಣ ಖರ್ಚು ಮಾಡಿದೆ. ಆದ್ರೆ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮಿಲಾಗಿ ಕಳಪೆ ಕಾಮಗಾರಿ ಮಾಡಿರೋದು ಈ ಅವಘಡಕ್ಕೆ ಕಾರಣವಾಗಿದ್ದು, ಲಕ್ಷಾಂತರ ರೂ. ಹಣದ ಜೊತೆಗೆ ಅಪಾರ ಪ್ರಮಾಣದ ನೀರು ಹಳ್ಳಕ್ಕೆ ಹೋಮ ಮಾಡಿದಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕ್ತಿದ್ದಾರೆ.

ಈ ಬಗ್ಗೆ ಮಲಪ್ರಭಾ ಬಲದಂಡೆ ಕಾಲುವೆ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೂಡಾ ಬೇಜವಾಬ್ದಾರಿತನದ ಉತ್ತರ ನೀಡುತ್ತಿದ್ದಾರೆ. ಮಲಪ್ರಭೆ ಹರಿದು ಬಂದ್ರು ಈ ಭಾಗದ ಜನರ ಕೈಗೆಟುಕದಂತಾಗಿದ್ದಾಳೆ. ಬಾಯಾರಿಕೆಯಿಂದ ಬಳಲುತ್ತಿದ್ದ ಜನರ ದಾಹ ನೀಗಿಸಬೇಕಿದ್ದ ನೀರು ಕೈಗೆ ಸಿಗದಂತಾಗಿದೆ. ಇದ್ರಿಂದ ಮಲಪ್ರಭೆ ಬೇಸಿಗೆ ಬವಣೆ ನೀಗಿಸಬಹುದೆಂದು ಕಾದು ಕುಳಿತ ಜನರ ಆಸೆಗೆ ತಣ್ಣೀರು ಎರಚಿದಂತಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *