ಶೇಖ್ ಹಸೀನಾ ಭಾರತದ ಮೂಲಕ ಲಂಡನ್‌ಗೆ ಪಲಾಯನ; ಭಾರತ-ಬಾಂಗ್ಲಾ ಗಡಿಯಲ್ಲಿ ಹೈಅಲರ್ಟ್

Public TV
2 Min Read

– ಮಧ್ಯಂತರ ಸರ್ಕಾರ ರಚಿಸುತ್ತೇವೆ ಎಂದ ಸೇನಾ ಮುಖ್ಯಸ್ಥ

ಢಾಕಾ/ನವದೆಹಲಿ: ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಾಗೂ ಸೇನೆಯೊಂದಿಗಿನ ಕಿತ್ತಾಟ ತಾರಕಕ್ಕೇರಿದ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ (Sheikh Hasina) ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಸದ್ಯ ಅವರು ಮಿತ್ರರಾಷ್ಟ್ರ ಭಾರತದ (India) ಮೂಲಕ ಲಂಡನ್‌ಗೆ ಪಲಾಯನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಅಂದ್ರೆ ಮಧ್ಯಾಹ್ನ 2:30ರ ಸುಮಾರಿಗೆ ಸೇನಾ ಹೆಲಿಕಾಪ್ಟರ್‌ನಲ್ಲಿ ಬಂಗಾಬಬಾನ್‌ನಿಂದ ಅವರ ಕಿರಿಯ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಸುರಕ್ಷಿತ ಸ್ಥಳಕ್ಕೆ ಪ್ರಯಾಣ ಬೆಳೆಸಿದರು. ಹಸೀನಾ ಅವರು ಭಾರತದೊಂದಿಗೆ ಹೆಚ್ಚು ಮಿತ್ರತ್ವ ಹೊಂದಿರುವ ಕಾರಣ, ಭಾರತಕ್ಕೆ ಆಗಮಿಸಿ ಅಲ್ಲಿಂದ ಲಂಡನ್‌ಗೆ (London) ತೆರಳಿದ್ದಾರೆ ಎಂದು ವರದಿಯಾಗಿದೆ.

ಭಾರತ-ಬಾಂಗ್ಲಾ ಗಡಿಯಲ್ಲಿ ಕಟ್ಟೆಚ್ಚರ:
ಪ್ರಧಾನಿ (Prime Minister) ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಿಎಸ್‌ಎಫ್ ಭದ್ರತಾ ಪಡೆಯನ್ನು ನಿಯೋಜಿಸಲಾಗಿದ್ದು, ಬಿಎಸ್‌ಎಫ್ ಡಿಜಿ ಕೂಡ ಬಾಂಗ್ಲಾ ಗಡಿಗೆ ತಲುಪಿದ್ದಾರೆ ಎಂದು ಬಿಎಸ್‌ಎಫ್ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಬಾಂಗ್ಲಾ ಹಿಂಸಾಚಾರಕ್ಕೆ 72 ಮಂದಿ ಬಲಿ – ಸಂಪರ್ಕದಲ್ಲಿರುವಂತೆ ಭಾರತೀಯರಿಗೆ ಕೇಂದ್ರ ಸೂಚನೆ

ಮಧ್ಯಂತರ ಸರ್ಕಾರ ರಚಿಸುತ್ತೇವೆ:
ಶೇಖ್ ಹಸೀನಾ ರಾಜೀನಾಮೆ ಖಚಿತ ಪಡಿಸಿರುವ ಸೇನಾ ಮುಖ್ಯಸ್ಥರು, ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ರಚನೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಕ್ಷಿಪ್ರ ಮಿಲಿಟರಿ ಕ್ರಾಂತಿ – ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆ

ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ದೇಶ ಕಳೆದುಕೊಂಡಿದ್ದ ಶಾಂತಿಯನ್ನು ಮರುಸ್ಥಾಪಿಸುತ್ತೇವೆ. ನಾನು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದೇನೆ. ಹಿಂಸೆ ನಿಲ್ಲಿಸುವಂತೆ ನಾಗರಿಕರಿಗೆ ಮನವರಿಕೆ ಮಾಡಿಕೊಡುತ್ತೇವೆ. ಕಳೆದ ಕೆಲವು ವಾರಗಳಲ್ಲಿ ನಡೆದ ಎಲ್ಲಾ ಹತ್ಯೆಗಳ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಇನ್ಮುಂದೆ ದೇಶದಲ್ಲಿ ಕರ್ಫ್ಯೂ ಅಥವಾ ಯಾವುದೇ ತುರ್ತು ಪರಿಸ್ಥಿತಿಯ ಅಗತ್ಯವಿಲ್ಲ. ಇಂದು (ಆ.5) ರಾತ್ರಿಯೊಳಗೆ ಬಿಕ್ಕಟ್ಟಿಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಾಕರ್ ಉಜ್ ಝಮಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಜನನ ದರ ಹೆಚ್ಚಿಸಲು ಪ್ಲ್ಯಾನ್‌; ಮದ್ವೆ ಆಗೋದು, ಮದ್ವೆ ಮಾಡ್ಸೋದನ್ನ ಕಾಲೇಜಿನಲ್ಲೇ ಹೇಳಿಕೊಡ್ತಾರಂತೆ!

ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಕಾರಣ ಏನು?
ಬಾಂಗ್ಲಾದೇಶದಲ್ಲಿ ಪ್ರಸ್ತುತ ಕೋಟಾ ವ್ಯವಸ್ಥೆ ಪ್ರಕಾರ ಸರ್ಕಾರಿ ಉದ್ಯೋಗಗಳಲ್ಲಿ 56% ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಶೇ.30, ಹಿಂದುಳಿದ ಜಿಲ್ಲೆಗಳವರಿಗೆ ಶೇ.10, ಮಹಿಳೆಯರಿಗೆ ಶೇ.10, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇ.5 ಹಾಗೂ ಅಂಗವಿಕಲರಿಗೆ ಶೇ.1 ಮೀಸಲಾತಿ ಕಲ್ಪಿಸಲಾಗಿದೆ. ವಿಮೋಚನಾ ಹೋರಾಟದ ಕುಟುಂಬಸ್ಥರಿಗೆ ಕಲ್ಪಿಸಿರುವ ಶೇ.30 ಮೀಸಲಾತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಬೇಡಿಕೆಯನ್ನು ನಿರ್ಗಮಿತ ಪ್ರಧಾನಿ ಶೇಕ್‌ ಹಸೀನಾ ತಿರಸ್ಕರಿಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.

Share This Article