ಮಾರ್ಚ್ ನಂತ್ರ ನ್ಯಾಯಬೆಲೆ ಅಂಗಡಿಗಳಲ್ಲಿ ಸಕ್ಕರೆ ಸಿಗಲ್ಲ!

Public TV
1 Min Read

ಬೆಂಗಳೂರು: ಮುಂಬರುವ ಮಾರ್ಚ್ ತಿಂಗಳಿನಿಂದ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಕ್ಕರೆ ವಿತರಣೆಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವ ಬಗ್ಗೆ ಆಹಾರ ಸಚಿವ ಯು ಟಿ ಖಾದರ್ ಸುಳಿವು ನೀಡಿದ್ದಾರೆ.

ಇಂದು ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಕೆ.ಜಿ ಸಕ್ಕರೆಗೆ ಕೇಂದ್ರ ಸರ್ಕಾರ ಹದಿನೆಂಟೂವರೆ ರೂ. ಸಬ್ಸಿಡಿ ನೀಡುತ್ತಿತ್ತು. ಕಳೆದ ಬಜೆಟ್‍ನಲ್ಲಿ ಆ ಸಬ್ಸಿಡಿಯನ್ನ ನಿಲ್ಲಿಸಿದೆ. ಇದ್ರಿಂದ ರಾಜ್ಯ ಸರ್ಕಾರಕ್ಕೆ ಸಕ್ಕರೆ ವಿತರಣೆ ಮಾಡುವುದು ಹೊರೆಯಾಗುತ್ತಿದೆ ಅಂತಾ ಹೇಳಿದ್ರು.

ಗ್ರಾಮೀಣಪ್ರದೇಶದಲ್ಲಿ ಎಲ್‍ಪಿಜಿ ಕನೆಕ್ಷನ್ ಇದ್ದವರಿಗೆ ಒಂದು ಲೀಟರ್ ಸೀಮೆಎಣ್ಣೆ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಈ ಕುರಿತು ಗ್ರಾಮಪಂಚಾಯತಿಯಲ್ಲಿ ನೊಂದಾವಣಿ ಮಾಡಿಕೊಂಡ್ರೆ ಮಾರ್ಚ್‍ನಿಂದಲೇ ಸೀಮೆಎಣ್ಣೆ ವಿತರಣೆ ಆರಂಭವಾಗಲಿದೆ. ಎಲ್‍ಪಿಜಿ ಕನೆಕ್ಷನ್ ಇಲ್ಲದವರಿಗೆ 3 ಲೀಟರ್ ಸೀಮೆಎಣ್ಣೆ ವಿತರಿಸೋದಾಗಿ ಸಚಿವ ಖಾದರ್ ಹೇಳಿದ್ದಾರೆ.

ರೇಷನ್ ಕಾರ್ಡ್‍ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಕೊಳ್ಳುವುದು ಜೂನ್ ತಿಂಗಳ ಕಾಲ ರಾಜ್ಯ ಸರ್ಕಾರ ಸಮಯ ನೀಡಿದೆ. ನಾಲ್ಕು ಕೋಟಿ ಸದಸ್ಯರಲ್ಲಿ ಮೂರೂವರೆ ಕೋಟಿ ಜನರು ಮಾತ್ರ ರೇಷನ್ ಕಾರ್ಡ್ ನಲ್ಲಿ ಆಧಾರ್ ಲಿಂಕ್ ಮಾಡಿಸಿಕೊಂಡಿದ್ದಾರೆ. ಇನ್ನೂ 55 ಲಕ್ಷ ಜನ ಸದಸ್ಯರು ಆಧಾರ್ ಲಿಂಕ್ ಮಾಡಿಸಿಕೊಂಡಿಲ್ಲ. ಆಧಾರ್ ಲಿಂಕ್ ಮಾಡಿಸಿಕೊಳ್ಳದವರಿಗೆ ಏಪ್ರಿಲ್ ನಿಂದ ಪಡಿತರ ವಿತರಣೆ ನಿಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಅಂತಾ ಖಾದರ್ ವಿವರಿಸಿದ್ರು.

ಚಪ್ಪಲಿ ಹೇಳಿಕೆ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಅವರ ಮಂಗಳೂರು ಭೇಟಿಯನ್ನ ವಿರೋಧಿಸುತ್ತಿದ್ದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ಹೇಳಿಕೆ ಕುರಿತಂತೆ ಸಚಿವರು ಈ ವೇಳೆ ವಿಷಾದ ವ್ಯಕ್ತಪಡಿಸಿದ್ದಾರೆ. ನನ್ನ ಹೇಳಿಕೆ ಸಂವಿಧಾನ ವಿರೋಧಿಸುತ್ತಿದ್ದವರಿಗೆ ಮಾತ್ರ ಅನ್ವಯಿಸುತ್ತದೆ. ಆದ್ರೆ ಚಪ್ಪಲಿ ಅನ್ನೋ ಭಾಷೆ ಬಳಸಬಾರದಿತ್ತು. ಮುಂದೆ ಈ ರೀತಿಯ ಹೇಳಿಕೆ ನೀಡುವಾಗ ಎಚ್ಚರಂದಿರುತ್ತೇನೆ ಅಂತಾ ಹೇಳಿದ ಅವರು, ಪಾಕಿಸ್ತಾನದ ಪ್ರಧಾನಿಯವರನ್ನು ರಾಷ್ಟ್ರಕ್ಕೆ ಕರೆದು ಟೀ ಕುಡಿಸಿ ಕಳುಹಿಸುತ್ತಾರೆ. ನಮ್ಮ ಪಕ್ಕದ ರಾಜ್ಯದ ಕೇರಳ ಮುಖ್ಯಮಂತ್ರಿ ರಾಜ್ಯಕ್ಕೆ ಆಗಮಿಸೋದ್ರಲ್ಲಿ ತಪ್ಪೇನಿದೆ. ಇದನ್ನ ವಿರೋಧಿಸಿದ್ದು ಸರಿಯಲ್ಲ ಅಂತಾ ಖಾದರ್ ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *