ಶಿರೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಭೂ ಸಮಾಧಿ – ಅಂತ್ಯಸಂಸ್ಕಾರ ಮಾಡಲೂ ಜನರಿಲ್ಲ

By
2 Min Read

– ಗುಡ್ಡ ಕುಸಿದು 10 ಮಂದಿ ಬಲಿ
– ಕಣ್ಮರೆಯಾದವರಿಗೆ ಶೋಧಕಾರ್ಯ

ಕಾರವಾರ: ರಾಜ್ಯದ ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಮರಣ ಮಳೆಯಾಗಿ ಬದಲಾಗಿದೆ. ಅದರಲ್ಲೂ ರಣಮಳೆ ಮತ್ತು ಭಾರೀ ಭೂಕುಸಿತಗಳಿಂದ ಉತ್ತರ ಕನ್ನಡ (Uttara Kannada) ಜಿಲ್ಲೆ ತತ್ತರಿಸಿ ಹೋಗಿದೆ. ಅಂಕೋಲಾದ ಶಿರೂರು (Shirur) ಬಳಿ ಮಂಗಳೂರು ಗೋವಾಗೆ ಸಂರ್ಪಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿದು ಕನಿಷ್ಠ 10 ಮಂದಿ ಬಲಿ ಆಗಿದ್ದಾರೆ.

ಮೃತರಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಐವರಿದ್ದಾರೆ. ಇನ್ನೂ 20 ಮಂದಿ ಕಣ್ಮರೆಯಾಗಿರುವ ಶಂಕೆ ಇದ್ದು, ಭಾರೀ ಮಳೆ ನಡುವೆ ಎನ್‌ಡಿಆರ್‌ಎಫ್ ಶೋಧ ಕಾರ್ಯ ನಡೆಸಿದ್ದು, ಐವರ ಶವ ಹೊರತೆಗೆದಿದೆ.  ಮಂಗಳವಾರ ಇಡೀ ದಿನ ನಡೆದ ಎನ್‌ಡಿಆರ್‌ಎಫ್ (NDRF) ಕಾರ್ಯಚರಣೆ ರಾತ್ರಿ ವೇಳೆ ಸ್ಥಗಿತ ಮಾಡಲಾಗಿದ್ದು ಇಂದು ಮುಂದುವರಿಯಲಿದೆ.

ಜೀವನ ನಿರ್ವಹಣೆಗಾಗಿ ದೂರದ ಕಾರವಾರದಿಂದ ಬಂದು ಗಂಗಾವಳಿ ನದಿ ಬಳಿಯ ಶಿರೂರಿನಲ್ಲಿ ಟೀ ಅಂಗಡಿ (Tea Shop) ವ್ಯಾಪಾರ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ್ ಇಡೀ ಕುಟುಂಬವೇ ಗುಡ್ಡ ಕುಸಿತಕ್ಕೆ ಬಲಿಯಾಗಿದೆ. ಇಡೀ ದಿನ ನಡೆದ ಕಾರ್ಯಚರಣೆಯಲ್ಲಿ 6 ಜನರ ಮೃತ ದೇಹ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಹೇಳಿದ್ದಾರೆ. ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ತುಂಗಭದ್ರ – ಉಕ್ಕಡಗಾತ್ರಿ ಸ್ನಾನಘಟ್ಟ, ಅಂಗಡಿಗಳು ಜಲಾವೃತ

ಮೃತರನ್ನು ಲಕ್ಷ್ಮಣ ನಾಯ್ಕ್, ಶಾಂತಿ ನಾಯ್ಕ್, ರೋಶನ್, ಅವಂತಿಕಾ, ಜಗನ್ನಾಥ ಎಂದು ಗುರುತಿಸಲಾಗಿದೆ. ಈ ನತದೃಷ್ಟ ಕುಟುಂಬದಲ್ಲಿ ಅಂತ್ಯಕ್ರಿಯೆ ಮಾಡಲೂ ಯಾರು ಉಳಿದಿಲ್ಲ. ಸಂಬಂಧಿ ಲಕ್ಷ್ಮಣ ನಾಯ್ಕ್ ಕುಟುಂಬ ಬಲಿಯಾಗಿದೆ ಎಂಬ ಸುದ್ದಿ ತಿಳಿದು ಸ್ಥಳಕ್ಕೆ ಓಡಿ ಬಂದ ಸಂಬಂಧಿಕರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಲಕ್ಷ್ಮಣ ನಾಯ್ಕ್ ಕುಟುಂಬದ ಸದಸ್ಯರ ಸಾಮೂಹಿಕ ಅಂತ್ಯಕ್ರಿಯೆ ಮಾಡುವುದಾಗಿ ಹೇಳಿದರು.

 

ಶಿರೂರು ಬಳಿ ಕೇಂದ್ರ ಐಆರ್‌ಬಿ ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದು ಇದೇ ಕಾಮಗಾರಿ ನಡೆಯುಗ ಸ್ಥಳದಲ್ಲೇ ಲಕ್ಷ್ಮಣ ನಾಯ್ಕ್ ಕುಟುಂಬ ಟೀ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಸತತ ಮಳೆಯಿಂದಾಗಿ ಗುಡ್ಡದಲ್ಲಿ ನೀರು ಹರಿದು ಗುಡ್ಡ ಕುಸಿತವಾಗಿದೆ. ಕುಸಿತ ಗುಡ್ಡ ರಸ್ತೆಯಲ್ಲಿ ನಿಂತ ಎಲ್‌ಪಿಜಿ ಟ್ಯಾಂಕರ್ ಮೇಲೆ ಬಿದ್ದಿದೆ. ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಗೆ ಉರುಳಿದ್ದು, ನದಿಯಲ್ಲಿ ತೇಲುತ್ತಿದೆ. ಹೈವೇ ಪಕ್ಕ ಟ್ಯಾಂಕರ್ ನಿಲ್ಲಿಸಿದ್ದ ಚಾಲಕ ಮತ್ತು ಕ್ಲೀನರ್ ಟೀ ಕುಡಿಯುವಾಗ ಈ ದುರಂತ ಸಂಭವಿಸಿದೆ.

ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಸತೀಶ್ ಶೈಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಒಂದು ವರ್ಷದಿಂದ ಕೇಂದ್ರ ಐಆರ್‌ಬಿ ಅಧಿಕಾರಿಗಳಿಗೆ ರಸ್ತೆ ತೆರವು ಮಾಡಿಕೊಡುವಂತೆ ಮಾಡಿದ್ರು ಗಮನ ಹರಿಸಲಿಲ್ಲ.  ಸತತ ಮಳೆ ಹಾಗೂ ಐಆರ್‌ಬಿ ಅಧಿಕಾರಿಗಳ ಕಾಮಗಾರಿಗಳಿಂದಲೇ ಈ ದುರಂತವಾಗಿದೆ ಎಂದು ಮಂಕಾಳು ವೈದ್ಯ ಅಸಮಧಾನ ವ್ಯಕ್ತಪಡಿಸಿದರು.

 

Share This Article