ಸಾಲಬಾಧೆ ತಾಳಲಾರದೆ ವಿದ್ಯುತ್ ತಂತಿ ಹಿಡಿದು ರೈತ ಆತ್ಮಹತ್ಯೆ

Public TV
1 Min Read

ರಾಯಚೂರು : ಸಾಲಬಾಧೆ ತಾಳಲಾರದೆ ಜಿಲ್ಲೆಯ ಸಿಂಧನೂರು ತಾಲೂಕಿನ ಚಿತ್ರಾಲಿ ಗ್ರಾಮದ ರೈತರೊಬ್ಬರು ಇಂದು ಬೆಳಗಿನ ಜಾವ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

45 ವರ್ಷದ ಸಿದ್ದಯ್ಯಸ್ವಾಮಿ ಮೃತ ರೈತ. 9 ಎಕರೆ ಜಮೀನು ಹೊಂದಿದ್ದ ಸಿದ್ದಯ್ಯಸ್ವಾಮಿ ಅವರು ನೀರಿನ ಕೊರತೆಯಿಂದ ಬೆಳೆ ನಷ್ಟವಾಗಿ ಕೈ ಸಾಲ ಸೇರಿದಂತೆ ಬ್ಯಾಂಕ್‍ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ವಿದ್ಯುತ್ ಮೋಟಾರ್ ತಂತಿ ಹಿಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಿದ್ದಯ್ಯಸ್ವಾಮಿ ಅವರು ತಮ್ಮ ಒಂಬತ್ತು ಎಕರೆಯಲ್ಲಿ ಭತ್ತವನ್ನು ಬೆಳದಿದ್ದರು. ತುಂಗಭದ್ರ ಕಾಲುವೆಯ ನೀರನ್ನೇ ನಂಬಿ ಭತ್ತ ಬೆಳದಿದ್ದರು. ಬರಗಾಲದಿಂದ ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಸಿದ್ದಯ್ಯಸ್ವಾಮಿ ಬೆಳೆದ ಭತ್ತ ಸಂಪೂರ್ಣವಾಗಿ ಒಣಗಿ ಹೋಗಿತ್ತು. ರೈತ ಸಿದ್ದಯ್ಯಸ್ವಾಮಿ ಜವಳಗೇರಾ ಸಿಂಡಿಕೇಟ್ ಬ್ಯಾಂಕ್ ನಲ್ಲಿ 8 ಲಕ್ಷ ಸಾಲ, ಖಾಸಗಿಯಾಗಿ 8 ಲಕ್ಷ ಸಾಲ ಮಾಡಿಕೊಂಡಿದ್ದು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *