ʻವಿಶ್ವʼವಿಜಯಯಾತ್ರೆಗೆ ವರುಣ ಅಡ್ಡಿ – ಮಳೆಯಲ್ಲೂ ಕುಗ್ಗದ ಟೀಂ ಇಂಡಿಯಾ ಅಭಿಮಾನಿಗಳ ಉತ್ಸಾಹ

Public TV
2 Min Read

ಮುಂಬೈ: ಟಿ20 ವಿಶ್ವಕಪ್ (T20 World Cup) ವಿಜೇತ ಟೀಂ ಇಂಡಿಯಾದ (Team India) ವಿಕ್ಟರಿ ಪೆರೇಡ್​ಗೆ ಕ್ಷಣಗಣನೆ ಶುರುವಾಗಿದೆ. ವಿಶ್ವ ವಿಜೇತರನ್ನು ಅಭಿನಂದಿಸಲು (Team India victory parade) ಮುಂಬೈ ನಗರಿ ಸಿದ್ಧವಾಗಿ ನಿಂತಿದೆ. ಆದ್ರೆ ಅಭಿಮಾನಿಗಳ ಸಂಭ್ರಮಕ್ಕೆ ವರುಣ ತಡೆಯೊಡ್ಡಿದೆ.

ಸದ್ಯ ಮುಂಬೈನಲ್ಲಿ ವರುಣ ಸಿಂಚನವಾಗುತ್ತಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಭಾರೀ ಮಳೆಯಾಗುತ್ತಿದೆ. ಆದ್ರೆ ಅಭಿಮಾನಿಗಳು ಮಳೆಗೂ ಜಗ್ಗದೇ ಮೈದಾನದಲ್ಲೇ ನಿಂತಿದ್ದಾರೆ. ಕೆಲವರಂತೂ ಮಳೆಯಲ್ಲೇ ನೆನೆದುಕೊಂಡು ಟೀಂ ಇಂಡಿಯಾ ಪರ ಘೋಷಣೆ ಕೂಗುತ್ತಿದ್ದಾರೆ. ಆಟಗಾರರು ಈಗಾಗಲೇ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಈ ವಿಜಯಯಾತ್ರೆಯನ್ನು ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರ ಮಾಡುವುದಾಗಿ ಘೋಷಿಸಿದೆ.

ವಿಜಯಯಾತ್ರೆಗೆ ಹಿಟ್‌ಮ್ಯಾನ್‌ ಆಹ್ವಾನ:
ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮಾ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಭಾರತಕ್ಕೆ ಬರುವ ಮುನ್ನವೇ ರೋಹಿತ್​ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಈಗಾಗಲೇ ಅಭಿಮಾನಿಗಳು ಟೀಂ ಇಂಡಿಯಾ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಆಗಮಿಸಿದ್ದಾರೆ.

ತೆರೆದ ಬಸ್​ನಲ್ಲಿ ರೋಡ್ ಶೋ:
ಆಟಗಾರರು ಮುಂಬೈಗೆ ತಲುಪಿದೊಡನೆ ‘ಮುಂಬೈನ ನಾರಿಮನ್‌ ಪಾಯಿಂಟ್‌ನಿಂದ ಸರಿಯಾಗಿ 5 ಗಂಟೆಗೆ ರೋಡ್‌ ಶೋ ಆರಂಭವಾಗಲಿದೆ. ಅದಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರನ್ನು ಮತ್ತು ಮತ್ತು ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ. ಇದಾದ ಬಳಿಕ ಬಿಸಿಸಿಐ ಘೋಷಿಸಿರುವ 125 ಕೋಟಿ ರೂ. ಬಹುಮಾನ ಮೊತ್ತ ಕೂಡ ಪ್ರದಾನ ಮಾಡಲಾಗುತ್ತದೆ.

ಮುಂಬೈಗೆ ತೆರಳುವ ಮುನ್ನ ಟೀಮ್​ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ (Team India Arrival) ಭೇಟಿ ನೀಡಿ ವಿಶ್ವಕಪ್​ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್​ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ (PM Modi) ನಮೋ ನಂ.1 ಎಂದು ಬರೆದ ಟೀಂ​ ಇಂಡಿಯಾ ಜೆರ್ಸಿಯನ್ನು (Indian Cricket Jersey) ಉಡುಗೊರೆಯಾಗಿ ನೀಡಲಾಯಿತು.

Share This Article