ಡೈರಿ ಸ್ಫೋಟ ಬಳಿಕ ಕೈ ಕಕ್ಕಾಬಿಕ್ಕಿ – 4 ವರ್ಷ ಪೂರೈಸಿದ ಸಚಿವರಿಗೆ ಗೇಟ್‍ಪಾಸ್?

Public TV
2 Min Read

– ನಾಳೆಯ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಕಾಂಗ್ರೆಸ್ ಕಪ್ಪ ಕೊಟ್ಟಿರೋ ಡೈರಿ ಬೆಳಕಿಗೆ ಬಂದ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯಾಗಲಿದೆ. ನಾಲ್ಕು ವರ್ಷ ಪೂರೈಸಿದ ಸಚಿವರನ್ನ ಕೈ ಬಿಟ್ಟು ಅವರಿಗೆ ಪಕ್ಷದ ಜವಾಬ್ದಾರಿ ವಹಿಸಲು ಕಾಂಗ್ರೆಸ್ ನಲ್ಲಿ ಗಂಭೀರ ಚರ್ಚೆ ಆರಂಭವಾಗಿದ್ದು, ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ ಹೊರಬೀಳಲಿದೆ.

ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ಕೊಟ್ಟಿರುವ ವಿಚಾರ ಒಂದೆಡೆ ಆದ್ರೆ, ಇದೀಗ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ ತರಲು ಸಮನ್ವಯ ಸಮಿತಿ ಸಜ್ಜಾಗಿದೆ. ಭಾನುವಾರದಂದು ನಡೆಯಲಿರುವ 20 ಜನ ಸದಸ್ಯರಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಹಿರಿಯ ಸಚಿವರಿಗೆ ಗೇಟ್ ಪಾಸ್ ನೀಡಲು ಮಹತ್ವದ ಚರ್ಚೆ ನಡೆಯಲಿದೆ.

ನಾಲ್ಕು ವರ್ಷ ಪೂರೈಸಿದ ಸಚಿವರನ್ನ ಕೈಬಿಟ್ಟು ಹೊಸ ಮುಖಗಳಿಗೆ, ಆರೋಪಗಳಿಲ್ಲದವರಿಗೆ ಸಂಪುಟದಲ್ಲಿ ಅವಕಾಶ ನೀಡಲು ಚಿಂತಿಸಲಾಗುತ್ತಿದೆ. ಸಂಪುಟ ಸರ್ಜರಿಯಲ್ಲಿ ಪ್ರಾದೇಶಿಕತೆ, ಜಾತಿ ಸಮೀಕ್ಷೆ ಆಪಾದನೆ ಇಲ್ಲದವರಿಗೆ ಆದ್ಯತೆ ಹಾಗೂ ಸಂಪುಟದಿಂದ ಹೊರ ಬರುವ ಸಚಿವರಿಗೆ ಕನಿಷ್ಠ 15 ಕ್ಷೇತ್ರಗಳ ಸಂಘಟನಾ ಹೊಣೆ ನೀಡಲಾಗುತ್ತೆ ಎಂದು ಹೇಳಲಾಗಿದೆ.

ದಿಗ್ವಿಜಯ್ ಸಿಂಗ್ ನೇತೃತ್ವದ 20 ಸದಸ್ಯರಿರುವ ಕಾಂಗ್ರೆಸ್ ಸಮನ್ವಯ ಸಮಿತಿಯಲ್ಲಿ ಇರೋರೆಲ್ಲ ಬಹುತೇಕ ಮೂಲ ಕಾಂಗ್ರೆಸಿಗರು. ಜಾಫರ್ ಶರೀಫ್ ಸೇರಿದಂತೆ ಎಸ್.ಎಮ್ ಕೃಷ್ಣ ಕೂಡ ಈ ಸಮಿತಿಯಲ್ಲಿದ್ರು. ಆದ್ರೆ ಎಸ್.ಎಮ್.ಕೆ ಈಗ ಕಾಂಗ್ರೆಸ್ ನಲ್ಲಿ ಇಲ್ಲ. ಹೀಗಾಗಿ ಸಂಪುಟ ಮೇಜರ್ ಸರ್ಜರಿಗೆ ಸಿದ್ದು ಬಣ ಒಪ್ಪಲಿದೆಯಾ? ಅನ್ನೋ ಪ್ರಶ್ನೆ ಮೂಡಿದೆ. ಮೂಲ ಕಾಂಗ್ರೆಸಿಗರು ಹಾಗೂ ಸಿದ್ದು ಬಣದ ನಡುವೆ ಫೈಟ್ ನಡೆಯಲಿದೆ ಎನ್ನಲಾಗ್ತಿದೆ.

ನಾಲ್ಕು ವರ್ಷ ಪೂರೈಸಿದವರಲ್ಲಿ ಎಚ್.ಕೆ ಪಾಟೀಲ್, ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್, ಆರ್.ವಿ ದೇಶಪಾಂಡೆ, ಎಚ್.ಸಿ ಮಹದೇವಪ್ಪ, ಟಿ.ಬಿ ಜಯಚಂದ್ರ, ರಮಾನಾಥ ರೈ ಹೀಗೆ ಬಹುತೇಕ ಹಿರಿಯ ಸಚಿವರಿದ್ದಾರೆ. ಹಿರಿಯ ಸಚಿವರನ್ನ ಸಂಪುಟದಿಂದ ಕೈ ಬಿಟ್ರೆ, ಸಿಎಂ ಸರ್ಜರಿಗೂ ಸಿಎಂ ವಿರೋಧಿ ಹಿರಿಯ ಸಚಿವರು ಒತ್ತಾಯಿಸೋ ಸಾಧ್ಯತೆ ಇದೆ. ಸಿಎಂ ಮೇಲಿನ ಆರೋಪಗಳನ್ನೇ ಅಸ್ತ್ರವಾಗಿ ಬಳಸಬಹುದಾದ ಸಾಧ್ಯತೆಗಳಿವೆ.

ಇದೆಲ್ಲದರ ನಡುವೆ ಕಾಂಗ್ರೆಸ್ ಪಕ್ಷದಲ್ಲೂ ಭಾರೀ ಬದಲಾವಣೆಗೆ ಸಮನ್ವಯ ಸಮಿತಿ ವೇದೆಕೆಯಾಗಲಿದೆ. ಮೂಲ ಕಾಂಗ್ರೆಸಿಗರಿಗೆ ಹೆಚ್ಚು ಸ್ಥಾನ ನೀಡಲು ಒತ್ತಾಯಿಸಲಿದೆ. 20 ಜನ ಜಿಲ್ಲಾಧ್ಯಕ್ಷರ ಬದಲಾವಣೆಗೆ ಬಗ್ಗೆ ಹಾಗೂ 25 ಮಹಿಳೆಯರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎನ್ನಲಾಗ್ತಿದೆ. ಸೋತ 102 ಕ್ಷೇತ್ರಗಳಲ್ಲಿ ಆಂತರಿಕೆ ಸಮೀಕ್ಷೆ ಪ್ರಕಾರ ಗೆಲ್ಲೋ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಿದ್ದು, ನಂಜನಗೂಡು, ಗುಂಡ್ಲಪೇಟೆ ಉಪ ಚುನಾವಣೆ ಗೆಲ್ಲಲು ಶ್ರಮವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಒಟ್ಟಾರೆ ಭಾನುವಾರದ ಸಮನ್ವಯ ಸಮಿತಿ ಸಭೆ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *