ಕಾಂಗ್ರೆಸ್ ಸರ್ಕಾರದಿಂದ ಬೆಲೆ ಏರಿಕೆ ಗ್ಯಾರಂಟಿ: ಅಶ್ವಥ್ ನಾರಾಯಣ್ ವಾಗ್ದಾಳಿ

Public TV
3 Min Read

– ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಲ್ಲೇ ಪೆಟ್ರೋಲ್‌ ದರ ಹೆಚ್ಚು ಎಂದ ಮಾಜಿ ಡಿಸಿಎಂ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದ ಬಳಿಕ ನಿಷ್ಠೆಯಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳವನ್ನು (Petrol Price Hike) ಜನರಿಗೆ ಕೊಡುಗೆಯಾಗಿ ನೀಡಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ್ (Dr.C.N Ashwath Narayan) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇದರ ವಿರುದ್ಧ ಸೋಮವಾರ ಬಿಜೆಪಿ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್, ಎಲ್ಲಾ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಆಸ್ತಿ ತೆರಿಗೆ ಹೆಚ್ಚಳ, ಕುಡಿಯುವ ನೀರಿನ ದರ ಏರಿಕೆ, ವಿದ್ಯುತ್ ದರ ಏರಿಕೆ ಮಾಡಿದೆ. ವಾಹನಗಳ ತೆರಿಗೆ, ಆಸ್ತಿ ತೆರಿಗೆಯನ್ನೂ ಹೆಚ್ಚಿಸಿದೆ. ಸಾಲ ಪಡೆಯಲು ಬ್ಯಾಂಕ್‍ಗೆ ಹೋದರೆ ನೋಂದಣಿ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಹಣದುಬ್ಬರ, ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನವರು, ಚುನಾವಣೆ ವೇಳೆ ಬೆಲೆ ಇಳಿಸುವ ಭರವಸೆ ಕೊಟ್ಟಿದ್ದರು. ಇದೀಗ ರಾಜ್ಯದ ಜನತೆಗೆ ಕಾಂಗ್ರೆಸ್ಸಿನವರು ಬೆಲೆ ಏರಿಕೆಯ ಗ್ಯಾರಂಟಿ ಕೊಟ್ಟಿದ್ದಾರೆ. ಏರಿಸಿದ ದರವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸೋಲಿನಿಂದಾಗಿ ಜನರ ಮೇಲೆ ಸರ್ಕಾರ ಸೇಡು; ಇಂಧನ ದರ ಇಳಿಸುವವರೆಗೂ ಬಿಜೆಪಿ ಹೋರಾಟ- ಆರ್.ಅಶೋಕ್

ಪೆಟ್ರೋಲ್ ಬೆಲೆ 3ರೂ. ಮತ್ತು ಡೀಸೆಲ್ ಬೆಲೆ 3.50ರೂ ಏರಿಸಿದ್ದಾರೆ. ಕರ್ನಾಟಕ ಸೇಲ್ಸ್ ಟ್ಯಾಕ್ಸ್‌ನ್ನು 26% ರಿಂದ 30%ಗೆ ಏರಿಸಿದ್ದಾರೆ. ಡೀಸೆಲ್ ತೆರಿಗೆಯನ್ನು 14% ರಿಂದ 18%ಗೆ ಏರಿಸಿದ್ದಾರೆ. ಹಿಂದೆ 1ರೂ. ಹೆಚ್ಚಳ ಮಾಡಿದ್ದಾಗ ಹಣಕಾಸು ಸಚಿವ, ಆರ್ಥಿಕ ತಜ್ಞರಾಗಿ ಸಿದ್ದರಾಮಯ್ಯನವರು ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಲಿದೆ ಎಂದು ಪ್ರಬಲವಾಗಿ ವಿರೋಧಿಸಿದ್ದರು. ನಾಚಿಕೆ ಆಗಲ್ವ ಎಂಬ ಭಾಷೆಯನ್ನೂ ಬಳಸಿದ್ದರು. ಇವತ್ತು ವಿದ್ಯುತ್ ದರವನ್ನು 100% ನಿಂದ 150%ರಷ್ಟು ಏರಿಸಿದ್ದಾರೆ. ಯಾವ ರೀತಿ ಇವರು ಸಮಜಾಯಿಷಿ ಕೊಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಸ್ವಾತಂತ್ರ್ಯ ಬಂದ ಬಳಿಕ ಎಂದೂ ಕಾಣದ ಕೆಟ್ಟ ಆಡಳಿತ ಇದಾಗಿದೆ. ಕೆಟ್ಟ ನಿರ್ಧಾರ, ದರ ಏರಿಕೆಗಳನ್ನು ಏಕಾಏಕಿ ಮಾಡುತ್ತಿದ್ದಾರೆ. ಯಾವುದೇ ಸಮಾಲೋಚನೆ, ಮಾತುಕತೆ ಇಲ್ಲದೆ, ಸ್ಪಷ್ಟತೆ ಇಲ್ಲದೆ ಅಧಿಕಾರದ ದುರ್ಬಳಕೆ ಆಗುತ್ತಿದೆ. ಪೆಟ್ರೋಲ್‌ ದರ, ಬಿಜೆಪಿ ಆಡಳಿತ ನಡೆಸುವ ಹರಿಯಾಣ ರಾಜ್ಯದಲ್ಲಿ 95.54 ರೂ. ಉತ್ತರ ಪ್ರದೇಶದಲ್ಲಿ 94.55 ರೂ. ಗುಜರಾತ್‍ನಲ್ಲಿ 94.50 ರೂ. ಅಸ್ಸಾಂನಲ್ಲಿ 97 ರೂ. ದರ ಇದೆ. ಆದರೆ ಕಾಂಗ್ರೆಸ್ ಆಡಳಿತ ಮಾಡುವ ರಾಜ್ಯಗಳಲ್ಲಿ 103 ರೂ. 107 ರೂ. ತೆಲಂಗಾಣದಲ್ಲಿ 109.50 ರೂ. ಬಿಜೆಪಿಯೇತರ ಆಡಳಿತ ಇರುವ ಕೇರಳದಲ್ಲಿ 105.68 ರೂ. ದರ ಇದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಪರ ವಾತಾವರಣ ಇಲ್ಲ. ನೆಗೆಟಿವ್ ರೇಟಿಂಗ್ ಇದೆ. ಇಲ್ಲಿ ಭೂಮಿ ಸಿಗಲ್ಲ, ನೀರು ಕೊಡುವುದಿಲ್ಲ, ಕರೆಂಟ್ ದರ ಹೆಚ್ಚು, ಇಂಥ ಹತ್ತಾರು ಸಮಸ್ಯೆಗಳಿವೆ. ಆರ್ಥಿಕ ವ್ಯವಸ್ಥೆ ಹೆಚ್ಚಿಸಿ ಆದಾಯ ಹೆಚ್ಚಿಸಬೇಕಿತ್ತು. ಇರುವವರನ್ನು ಪೂರ್ತಿ ಕತ್ತು ಕುಯ್ದು, ಬದುಕಲು ಸಾಧ್ಯವಿಲ್ಲದ ರೀತಿಯಲ್ಲಿ ಕಾಂಗ್ರೆಸ್ ಆಡಳಿತ ಮಾಡುತ್ತಿದೆ. ಬಿಲ್ಡರ್‍ಗಳು, ಕೈಗಾರಿಕೆದಾರರು ರಾಜ್ಯವನ್ನು ತೊರೆಯುವಂತಾಗಿದೆ. ಹಣದುಬ್ಬರ ಒಂದೆಡೆ, ಇನ್ನೊಂದೆಡೆ ಲೂಟಿ, ಭ್ರಷ್ಟಾಚಾರ ಈ ಸರ್ಕಾರದಿಂದ ನಡೆದಿದೆ. ಎಲ್ಲರನ್ನೂ ಲೂಟಿ ಮಾಡುವ ಕಾರ್ಯ ನಡೆದಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಮೊತ್ತಕ್ಕಾಗಿ ಆತ್ಮಹತ್ಯೆ ಎನ್ನುವಷ್ಟು ಆಡಳಿತ ಹದಗೆಟ್ಟಿದೆ ಎಂದು ಅವರು ಸಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದರ್ಶನ್‍ಗೆ ಮತ್ತಷ್ಟು ಸಂಕಷ್ಟ- ಸ್ವಾಮಿ ಹತ್ಯೆ ದಿನ ಧರಿಸಿದ್ದ ಬಟ್ಟೆ, ಶೂ ಸೀಜ್

Share This Article