ವೀಡಿಯೋ: ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕೆಎಸ್‍ಆರ್‍ಟಿಸಿ ಬಸ್- ಮಹಿಳೆ ಸಜೀವ ದಹನ!

Public TV
1 Min Read

ಬೆಂಗಳೂರು: ಚಲಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ಹೊತ್ತಿಕೊಂಡು ನಡುರಾತ್ರಿ ಧಗಧಗಿಸಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ಬಳಿ ನಡೆದಿದೆ.

ಬಸ್ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಈ ದುರಂತದಲ್ಲಿ 58 ವರ್ಷದ ಭಾಗ್ಯಮ್ಮ ಎಂಬ ಮಹಿಳೆ ಸಜೀವ ದಹನವಾಗಿದ್ದಾರೆ. ಅವಘಡದಲ್ಲಿ 10 ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಮತಾ ಎಂಬ ಮಹಿಳೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಜೀವನ್ಮರಣದ ನಡುವೆ ಹೋರಾಟ ಮಾಡ್ತಿದ್ದಾರೆ. ಈಕೆ ಬದುಕಿಳಿಯೋ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗುತ್ತಿದೆ. ಇನ್ನು 7 ವರ್ಷದ ಮಾನಸ ಎಂಬ ಮಗುವಿನ ಅರ್ಧ ದೇಹ ಸುಟ್ಟು ಹೋಗಿದೆ. ಎರಡು ಕಿಲೋಮೀಟರ್ ಹಿಂದೆಯೇ ಬಸ್ ಎಂಜಿನ್‍ನಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡ್ರೂ ಚಾಲಕ ನಿರ್ಲಕ್ಷ್ಯ ವಹಿಸಿದ್ದ. ಬಸ್ಸನ್ನು ನಿಲ್ಲಿಸದೇ ಚಲಾಯಿಸಿದ್ದೆ ಈ ದುರಂತಕ್ಕೆ ಕಾರಣ ಎನ್ನಲಾಗ್ತಿದೆ.

ಮತ್ತೊಂದು ದುರಂತ ಅಂದ್ರೆ ಇನ್ನೆರಡು ಕಿಲೋಮೀಟರ್ ದಾಟಿದ್ರೆ ಮೃತ ದುರ್ದೈವಿ ಭಾಗ್ಯಮ್ಮ ಮನೆ ಸೇರಿಕೊಳ್ತಿದ್ರು. ಟೋಲ್ ದಾಟಿದ ನಂತರ ಮಗನಿಗೆ ಫೋನ್ ಮಾಡಿದ್ರು. ಮಗ 8ನೇ ಮೈಲಿಗೆ ಕಾರ್ ತಂದು ತನ್ನ ತಾಯಿಗಾಗಿ ಕಾಯ್ತಿದ್ದ. ಆದ್ರೆ, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪುತ್ರನ ಆಕ್ರಂದನ ಮುಗಿಲುಮುಟ್ಟಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ನೆಲಮಂಗಲ ಪೊಲೀಸ್ರು ತನಿಖೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *