ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಮಾತೃ ವಿಯೋಗ

Public TV
1 Min Read

ನವದೆಹಲಿ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರ ತಾಯಿ ಮಾಧವಿ ರಾಜೇ ಸಿಂಧಿಯಾ (Madhavi Raje Scindia) ಇಂದು ನಿಧನರಾದರು.

ಗ್ವಾಲಿಯರ್ ರಾಜಮನೆತನದ ‘ರಾಜಮಾತಾ’ ಮಾಧವಿ ರಾಜೇ ಸಿಂಧಿಯಾ ಅವರು ಕಳೆದ ಕೆಲವು ದಿನಗಳಿಂದ ಏಮ್ಸ್‌ನಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಗ್ಗೆ 9.28ರ ಸುಮಾರಿಗೆ ಕೊನೆಯುಸಿರೆಳೆದರು ಎಂಬುದಾಗಿ ಜ್ಯೋತಿರಾದಿತ್ಯ ಸಿಂಧಿಯಾ ಕಚೇರಿಯಿಂದ ಮಾಹಿತಿ ಲಭಿಸಿದೆ.

ನ್ಯುಮೋನಿಯಾ ಮತ್ತು ಸೆಪ್ಸಿಸ್‌ನಿಂದ ಬಳಲುತ್ತಿದ್ದ ಮಾಧವಿ ರಾಜೆ ಕಳೆದ ಮೂರು ತಿಂಗಳಿನಿಂದ ದೆಹಲಿಯ ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಮೂರನೇ ಹಂತದ ಮತದಾನಕ್ಕೂ ಮುನ್ನ ಸಿಂಧಿಯಾ ಕುಟುಂಬದ ರಾಜಮಾತೆ ಅವರ ಆರೋಗ್ಯ ಹದಗೆಟ್ಟ ಕಾರಣ ದೆಹಲಿ ಏಮ್ಸ್‌ಗೆ ದಾಖಲಾಗಿದ್ದರು.

ಸದ್ಯ ಮಾಧವಿ ರಾಜೆ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿ-ವಿಧಾನಗಳಿಗಾಗಿ ಮಧ್ಯಪ್ರದೇಶದ ಗ್ವಾಲಿಯರ್‌ಗೆ ತರಲಾಗುತ್ತದೆ. ಇದನ್ನೂ ಓದಿ: ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಸುಂದರಿ ಅರೆಸ್ಟ್

ಕಳೆದ ತಿಂಗಳುಗಳಿಂದ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಧವಿ ರಾಜೇ ಸಿಂಧಿಯಾ ಅವರ ಆರೋಗ್ಯ ಚಿಂತಾಜನಕ ಹಂತ ತಲುಪಿತ್ತು. ಈ ಸಂದರ್ಭದಲ್ಲಿ ಗುಣಾ ಸಂಸದೀಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಪತ್ನಿ ಪ್ರಿಯದರ್ಶಿನಿ ರಾಜೆ ಮತ್ತು ಪುತ್ರ ಮಹಾಅರ್ಯಮನ್ ಸಿಂಧಿಯಾ ಅವರೊಂದಿಗೆ ಚುನಾವಣಾ ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿ ಹೋಗಬೇಕಾಯಿತು.

Share This Article