ಕನಸಿನಲ್ಲಿ ನರಬಲಿ ಕೇಳಿದ ದೇವಿ – ವ್ಯಕ್ತಿಯನ್ನು ಬಡಿದು ಕೊಂದ ಮಹಿಳೆ

Public TV
1 Min Read

ಚಂಡೀಗಢ: ಕನಸಿನಲ್ಲಿ ದೇವಿ ನರಬಲಿ ನೀಡುವಂತೆ ಹೇಳಿದ್ದಾಳೆ ಎಂದು ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನನ್ನು ಹತ್ಯೆಗೈದ (Murder) ಘಟನೆ ಹರಿಯಾಣದ (Haryana) ಅಂಬಾಲಾ ಎಂಬಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಮಹೇಶ್ ಗುಪ್ತಾ (44) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಹತ್ಯೆಯಾದ ವ್ಯಕ್ತಿ ಮಹಿಳೆಗೆ ಪರಿಚಿತನಾಗಿದ್ದ ಎಂದು ತಿಳಿದು ಬಂದಿದೆ.

ಅಂಗಡಿಯೊಂದರ ಮಾಲೀಕರಾಗಿದ್ದ ಮಹೇಶ್ ಗುಪ್ತಾ ಮಹಿಳೆಯ ಮನೆಗೆ ಅಂಗಡಿಯಿಂದ ಕೆಲವು ವಸ್ತುಗಳನ್ನು ಕೊಡಲು ತೆರಳಿದ್ದರು. ಈ ವೇಳೆ ಆರೋಪಿ ಪ್ರಿಯಾ ಹಾಗೂ ಆಕೆಯ ಕುಟುಂಬಸ್ಥರು ಅವರನ್ನು ಹತ್ಯೆಗೈದಿದೆ ಎನ್ನಲಾಗಿದೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಕಳೆದ ನಾಲ್ಕೈದು ದಿನಗಳಿಂದ ತನ್ನ ಕನಸಿನಲ್ಲಿ ದೇವಿ ನರಬಲಿ ಕೇಳುತ್ತಿದ್ದಳು. ಇದೇ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆಗೈದಿರುವುದಾಗಿ ಹೇಳಿಕೊಂಡಿದ್ದಾಳೆ.

ಮಹೇಶ್ ಗುಪ್ತಾ ಅವರ ಸಹೋದರ, ತನ್ನ ದೂರಿನಲ್ಲಿ, ಪ್ರಿಯಾಳನ್ನು ಮಹೇಶ್ ತನ್ನ ಸಹೋದರಿ ಎಂದು ಪರಿಗಣಿಸಿದ್ದ. ಬುಧವಾರ ತನ್ನ ಅಂಗಡಿಯಿಂದ ಕೆಲವು ವಸ್ತುಗಳನ್ನು ಅವಳ ಮನೆಗೆ ತಲುಪಿಸಲು ಹೋಗಿದ್ದರು. ಅವರು ಹಿಂದಿರುಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.

ಗುಪ್ತಾ ಅವರ ಸ್ಕೂಟರ್ ಆರೋಪಿ ಮನೆ ಬಳಿ ಪತ್ತೆಯಾಗಿತ್ತು. ಈ ವೇಳೆ ಮಹಿಳೆಯ ಮನೆ ಬಾಗಿಲು ತೆರೆದಾಗ ಗುಪ್ತ ಅವರ ಮೇಲೆ ತೀವ್ರ ಹಲ್ಲೆ ನಡೆಸಿರುವುದು ಗೊತ್ತಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು, ಅವರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದರು.

ಈ ಸಂಬಂಧ ಕೊಲೆ ಆರೋಪಿ ಪ್ರಿಯಾ, ಆಕೆಯ ಸಹೋದರ ಹೇಮಂತ್ ಮತ್ತು ಸೊಸೆ ಪ್ರೀತಿ ಎಂಬ ಮೂವರನ್ನು ಪೊಲೀಸರು (Police) ಬಂಧಿಸಿದ್ದಾರೆ.

Share This Article