ಪತಿಯ ಬಂಧನದ ಬೆನ್ನಲ್ಲೇ ಮೋದಿ ವಿರುದ್ಧ ಸಿಡಿದೆದ್ದ ಕೇಜ್ರಿವಾಲ್‌ ಪತ್ನಿ

Public TV
2 Min Read

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ (Delhi Excise Policy Case) ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ( Delhi CM Arvind Kejriwal) ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ಈ ಬೆನ್ನಲ್ಲೇ ಕೇಜ್ರಿವಾಲ್‌ ಪತ್ನಿ ಸುನೀತಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಧಿಕಾರದ ದುರಹಂಕಾರದಿಂದ ಮೋದಿಯವರು ಮೂರು ಬಾರಿ ಚುನಾಯಿತ ಮುಖ್ಯಮಂತ್ರಿಯನ್ನು ಬಂಧಿಸಿ ಎಲ್ಲರನ್ನೂ ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇದು ದೆಹಲಿ ಜನತೆಗೆ ಮಾಡಿದ ದ್ರೋಹ. ನಿಮ್ಮ ಮುಖ್ಯಮಂತ್ರಿ ಸದಾ ನಿಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಅವರು ಜೈಲಿನ ಒಳಗಿರಲಿ, ಹೊರಗಿರಲಿ ಅವರ ಜೀವನ ದೇಶಕ್ಕೆ ಮುಡಿಪಾಗಿದೆ. ಅವರು ಜನರಿಗಾಗಿ, ಜನರಿಗೋಸ್ಕರ ಇದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಹಾಜರಾಗುವಂತೆ ಜಾರಿಗೊಳಿಸಿದ್ದ 9 ಸಮನ್ಸ್‌ಗೆ ಕೇಜ್ರಿವಾಲ್‌ ಗೈರಾಗಿದ್ದರು. ಹೈಕೋರ್ಟ್‌ನಲ್ಲೂ (High Court) ಇಡಿ ವಿಚಾರಣೆಯನ್ನು ಮುಂದೂಡವಂತೆ ಕೇಜ್ರಿವಾಲ್‌ ಪರ ವಕೀಲರು ಮನವಿ ಮಾಡಿದ್ದರು. ಆದರೆ ಹೈಕೋರ್ಟ್‌ ವಾದವನ್ನು ಪುರಸ್ಕರಿಸದೇ ಕೇಜ್ರಿವಾಲ್‌ಗೆ ರಕ್ಷಣೆ ನೀಡಲು ನಿರಾಕರಿಸಿತು. ಈ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಕೇಜ್ರಿವಾಲ್‌ ನಿವಾಸಕ್ಕೆ ತೆರಳಿ ಬಂಧಿಸಿದೆ. ಇದನ್ನೂ ಓದಿ: ಏನಿದು ದೆಹಲಿ ಮದ್ಯ ಹಗರಣ? ಕೇಜ್ರಿವಾಲ್‌ ಮೇಲಿರುವ ಆರೋಪ ಏನು? ಬಂಧನವಾದ ಪ್ರಮುಖರು ಯಾರು?

9 ಸಮನ್ಸ್‌ಗೆ ಗೈರು: 2023ರ ನವೆಂಬರ್‌ 23ಕ್ಕೆ ಮೊದಲ ಬಾರಿ ಕೇಜ್ರಿವಾಲ್‌ಗೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಆದರೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಡಿ.23 ರಂದು ಮತ್ತೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಈ ಸಮನ್ಸ್‌ಗೆ ಗೈರಾದ ನಂತರ 2024ರಲ್ಲಿ ಜ.3, ಜ.18, ಫೆ.2, ಫೆ.19, ಫೆ.26, ಮಾರ್ಚ್‌ 4 ರಂದು ಸಮನ್ಸ್‌ ಜಾರಿ ಮಾಡಲಾಗಿತ್ತು. ಈ ಎಲ್ಲಾ ಸಮನ್ಸ್‌ಗಳಿಗೆ ಗೈರಾದ ಹಿನ್ನೆಲೆಯಲ್ಲಿ ಮಾರ್ಚ್‌ 21 ರಂದು ಸಮನ್ಸ್‌ ಜಾರಿ ಮಾಡಿ ಕೇಜ್ರಿವಾಲ್‌ ಅವರನ್ನು ಇಡಿ ಬಂಧಿಸಿದೆ.

ಬಂಧನಗೊಂಡವರು ಯಾರು?: ಈ ಪ್ರಕಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ಮನೀಶ್‌ ಸಿಸೋಡಿಯಾ‌ (ಆಪ್ ಡಿಸಿಎಂ), ಸತ್ಯೇಂದ್ರ ಜೈನ್‌(ಆಪ್‌ ಸಚಿವ), ಸಂಜಯ್‌ ಸಿಂಗ್‌(ಆಪ್‌ ಸಂಸದ), ಕೆ.ಕವಿತಾ(ಬಿಆರ್‌ಎಸ್‌ ಶಾಸಕಿ).

Share This Article