‘ಭಾವತೀರ ಯಾನ’ದ ಟೈಟಲ್ ಲಾಂಚ್ : ಇದು ನೋವು, ನಲಿವುಗಳ ತಾಣ

Public TV
3 Min Read

ಸಿನಿಮಾ ಪ್ರೇಮಿಗಳ ತಂಡವೊಂದು  ಅತ್ಯಂತ ಶ್ರದ್ಧೆಯಿಂದ, ಪ್ರೀತಿಯಿಂದ ನಿರ್ಮಾಣ ಮಾಡಿದ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಆ ಸಿನಿಮಾದ ಹೆಸರೇ ಭಾವತೀರಯಾನ (Bhavateera Yana). ಇಂದಿನ ಯುವಕ, ಯುವತಿಯರ ಭಾವನೆ, ಪ್ರೀತಿಯ ಹಾಡು ಪಾಡು, ನೋವು ನಲಿವು, ಸುಖ ದುಖಗಳನ್ನು ತೆರೆದಿಡುವ ಪ್ರಯತ್ನವಾಗಿ ಈ ಸಿನಿಮಾ ಮೂಡಿಬಂದಿದೆ. ಆರೋಹಾ ಫಿಲಂಸ್ ಮೂಲಕ ಮಯೂರ ಅಂಬೇಕಲ್ಲು ಹಾಗೂ ತೇಜಸ್ ಕಿರಣ್ ವರ್ಷದ ಹಿಂದೆ ಫಸ್ಟ್ ಲವ್ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದರು, ಮಯೂರ ಅಂಬೆಕಲ್ಲು ನಿರ್ದೇಶನದ ಆ ಕಿರುಚಿತ್ರ ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯಾಗಿ ನೋಡುಗರೆಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು, ಅದರ ಎರಡನೇ ಭಾಗ ಮಾಡಿದಾಗ ಇದನ್ನು  ಸಿನಿಮಾ ಮಾಡಿ ಎಂದು ಹಿರಿಯರೆಲ್ಲರೂ ನೀಡಿದ ಸಲಹೆಯಿಂದ ಪ್ರೇರಿತರಾದ ಈ ತಂಡ ಇದೀಗ ಎರಡು ಭಾಗದ ಈ ಶಾರ್ಟ್ ಫಿಲಂ ಅನ್ನು ಸಿನಿಮಾ ರೂಪಕ್ಕೆ ತಂದಿದೆ, ಆ ಚಿತ್ರದ ಶೀರ್ಷಿಕೆ (Title) ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು.

ಒಬ್ಬ ಹುಡುಗನ ಪ್ರೀತಿಯ ಪಯಣ ಈ ಚಿತ್ರದಲ್ಲಿದ್ದು, ತೇಜಸ್ ಕಿರಣ್ ಹಾಗೂ ಆರೋಹಿ ನೈನಾ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇವರ ಸಂಧ್ಯಾಕಾಲದ ಪಾತ್ರಗಳನ್ನು ಹಿರಿಯ ಕಲಾವಿದರಾದ ರಮೇಶ್ ಭಟ್ ಹಾಗೂ ವಿದ್ಯಾಮೂರ್ತಿ ನಿರ್ವಹಿಸಿದ್ದಾರೆ. ಅಂಕಣಕಾರ ಎ.ಆರ್. ಮಣಿಕಾಂತ್ ಅವರ ಜನಪ್ರಿಯ ಲೇಖನಗಳ ಗುಚ್ಚ ಭಾವತೀರಯಾನ, ಅದನ್ನೇ ತಮ್ಮ ಚಿತ್ರದ ಶೀರ್ಷಿಕೆಯಾಗಿ ಮಯೂರ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ಭಾಮಾ ಹರೀಶ್, ನಿತ್ಯಾನಂದ ಪ್ರಭು, ಕರಿಸುಬ್ಬು, ಶಿಲ್ಪಾ ಶ್ರೀನಿವಾಸ್, ಲಯನ್ ವೆಂಕಟೇಶ್ ಅಲ್ಲದೆ ಪತ್ರಕರ್ತ ಎ.ಆರ್. ಮಣಿಕಾಂತ್ ಕೂಡ ಹಾಜರಿದ್ದು ಟೈಟಲ್ ಲಾಂಚ್ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟ ರಮೇಶ್ ಭಟ್ ನನ್ನ 50 ವರ್ಷಗಳ ಜರ್ನಿಯಲ್ಲಿ ಮನೆಗೆ ಸ್ವೀಟ್ಸ್, ಬೊಕ್ಕೆ ತಂದು ಪಾತ್ರ ಕೊಟ್ಟವರು ತುಂಬಾ ವಿರಳ. ಈ ಹುಡುಗರು ನನಗೆ ಅಷ್ಟು ಗೌರವ ಕೊಟ್ಟರು. ಈ ಇಬ್ಬರು ಹುಡುಗರು ತುಂಬಾ ಕಾನ್ಫಿಡೆಂಟಾಗಿ ಸಿನಿಮಾ ಮಾಡಿದ್ದಾರೆ, ಇಡೀ ತಂಡ ಪ್ರೀತಿಯಿಂದ ಹಾನೆಸ್ಟಾಗಿ ಕೆಲಸ ಮಾಡಿದೆ. ಮನುಷ್ಯನಿಗೆ ಪ್ರಬುದ್ದತೆ ಬಂದಮೇಲೆ ತಾನು ಮಾಡಿದ ಸರಿ ತಪ್ಪುಗಳನ್ನು ಅವಲೋಕಿಸುವ ಸಮಯ ಬಂದಿರುತ್ತದೆ, ಮನದ ತೊಳಲಾಟಗಳನ್ನು ವ್ಯಕ್ತಪಡಿಸುವ ನನ್ನ ಈ ಪಾತ್ರ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ ಎಂದು ಹೇಳಿದರು. ನಂತರ ಮಾತನಾಡಿದ ವಿದ್ಯಾಮೂರ್ತಿ ಇದು ಭಾವನೆಗಳೇ ತುಂಬಿದ ಯಾನ ಎನ್ನಬಹದು. ರಮೇಶ್ ಭಟ್ ಅವರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದರು.

ನಾಯಕನಟ ತೇಜಸ್ ಮಾತನಾಡುತ್ತ, ಒಬ್ಬ ಯುವಕನ ಲೈಫ್ ಜರ್ನಿ ಈ ಚಿತ್ರದಲ್ಲಿದೆ. ವಿದ್ಯಾಮೂರ್ತಿ ಅವರ ಪ್ರಿ ಕ್ಲೈಮ್ಯಾಕ್ಸ್ ಸೀನ್ ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ, ವಿಶಾಖ ನಾಗಲಾಪುರ ತುಂಬಾ ಚೆನ್ನಾಗಿ  ಡೈಲಾಗ್ ಬರೆದಿದ್ದಾರೆ. ಎರಡೂ ಭಾಗದ ಶಾರ್ಟ್ ಫಿಲಂ 40 ನಿಮಿಷ ಇತ್ತು, ನಂತರ ಒಂದಷ್ಟು ಪಾತ್ರಗಳನ್ನು ಸೇರಿಸಿದಾಗ ಒಂದು ಗಂಟೆಯ ಕಥೆ ಹೆಚ್ಚಾಯಿತು. ನಮ್ಮ ಸಿನಿಮಾ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದರು.

 

ನಿರ್ದೇಶನದ ಜೊತೆ ಸಂಗೀತ ಸಂಯೋಜನೆಯನ್ನೂ ಮಾಡಿರುವ  ಮಯೂರ (Mayura) ಮಾತನಾಡುತ್ತ ಈ ಕಾನ್ಸೆಪ್ಟ್ ಶುರುವಾಗಲು ಕಾರಣ ಕೃಷ್ಣ, ಅವರು ಕೊಟ್ಟ ಸಣ್ಣ ಲೈನ್ ಈಗ ಸಿನಿಮಾವಾಗಿದೆ. ನಮ್ಮ ತಂದೆ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿಕೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಎಂದರು. ನಂತರ ನಾಯಕಿ ಆರೋಹಿ ನೈನಾ ಮಾತನಾಡಿ  ನಮ್ಮ ಪುಟ್ಟ ಹೆಜ್ಜೆಗೆ ನಿಮ್ಮ ಸಹಕಾರ ಬೇಕು. ಆರಂಭದಲ್ಲಿ ವೆಬ್ ಸೀರೀಸ್ ಮಾಡಬೇಕು ಎಂದುಕೊಂಡಿದ್ದೆವು, ನಂತರ ಶಾರ್ಟ್ ಫಿಲಂ ಈಗ ಚಲನಚಿತ್ರವಾಗಿದೆ ಎಂದರು.

Share This Article