ರಾಮಲಲ್ಲಾ ದರ್ಶನಕ್ಕೆ ಅಯೋಧ್ಯೆಗೆ ಬಸ್‌ನಲ್ಲಿ ತೆರಳಿದ ಯುಪಿ ಶಾಸಕರು

Public TV
1 Min Read

ಲಕ್ನೋ: ಅಯೋಧ್ಯೆಯಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ರಾಮಮಂದಿರಕ್ಕೆ (Ayodhya Ram Mandir) ಉತ್ತರ ಪ್ರದೇಶ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಇಂದು ಬಸ್‌ಗಳಲ್ಲಿ ತೆರಳಿದ್ದಾರೆ.

ರಾಮಲಲ್ಲಾನ ದರ್ಶನ ಪಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ವಿಧಾನಸಭಾ ಸ್ಪೀಕರ್ ಸತೀಶ್ ಮಹಾನಾ ಅವರು ಶಾಸಕರನ್ನು ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಶಾಸಕರು ಅಯೋಧ್ಯೆಯತ್ತ ಹೊರಟಿದ್ದಾರೆ. ತಮ್ಮ ಬಸ್ ಪ್ರಯಾಣಕ್ಕೂ ಯುಪಿ ಅಸೆಂಬ್ಲಿಯ ಹೊರಗೆ ಜಮಾಯಿಸಿದ ಶಾಸಕರು ‘ಜೈ ಶ್ರೀ ರಾಮ್ ‘ (Jai Shri Ram) ಎಂದು ಘೋಷಣೆ ಕೂಗಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನಸಭಾ ಸ್ಪೀಕರ್, ಇದು ನನಗೆ ತುಂಬಾ ಸಂತೋಷ ಹಾಗೂ ಭಾವನಾತ್ಮಕ ಕ್ಷಣವಾಗಿದೆ. ದೇವರು ನನಗೆ ಅವಕಾಶವನ್ನು ದಯಪಾಲಿಸಿದ್ದಾನೆ. ಈ ರೂಪದಲ್ಲಿ ಎಲ್ಲಾ ಶಾಸಕರೊಂದಿಗೆ ಅಯೋಧ್ಯೆಗೆ ತೆರಳುತ್ತಿರುವುದು ನನ್ನ ಅದೃಷ್ಟ ಎಂದರು. ಇದನ್ನೂ ಓದಿ: ಅಯೋಧ್ಯೆಗೆ ವೀಕೆಂಡ್‌ನಲ್ಲಿ ಭಕ್ತಸಾಗರ- VIP ಗೇಟ್ ತೆರೆದ ಆಡಳಿತ ಮಂಡಳಿ

ಇದೇ ವೇಳೆ ಪ್ರತಿಪಕ್ಷಗಳ ಪಾಲ್ಗೊಳ್ಳುವಿಕೆಯ ಕುರಿತು ಕೇಳಿದ ಪ್ರಶ್ನೆಗೆ ಸ್ಪೀಕರ್, ಬರಬೇಕಾದವರು ಬರುತ್ತಾರೆ. ನಂಬಿಕೆ ಮತ್ತು ಧರ್ಮದ ಚರ್ಚೆಗಳನ್ನು ಯಾರ ಮೇಲೂ ಹೇರಲು ಸಾಧ್ಯವಿಲ್ಲ. ನಾನು ಶಾಸಕಾಂಗ ಸಭೆಯಲ್ಲಿ ಕೈ ಎತ್ತುವಂತೆ ಕೇಳಿದಾಗ ಕೇವಲ 14 ಶಾಸಕರು ಆಕ್ಷೇಪ ವ್ಯಕ್ತಪಡಿಸಿ, ಹೋಗುವುದಿಲ್ಲ ಎಂದು ಹೇಳಿದರು. ಇತರರು ಹಾಜರಾಗಲು ಸಿದ್ಧರಾಗಿರುವುದಾಗಿ ತಿಳಿಸಿದ್ದರು ಎಂದರು.

ಬಿಜೆಪಿ ಶಾಸಕ ರಿತೇಶ್ ಗುಪ್ತಾ ಪ್ರತಿಕ್ರಿಯಿಸಿ, ರಾಮಲಲ್ಲಾನ ದರ್ಶನವನ್ನು ಪಡೆಯುವ ಅವಕಾಶವನ್ನು ನಾನು ಪಡೆದಿದ್ದೇನೆ. ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಎಲ್ಲರೂ ಅಯೋಧ್ಯೆಗೆ ಭೇಟಿ ನೀಡಿ ದರ್ಶನ ಪಡೆಯಲು ಬಯಸಿದ್ದರು. ಅದರಂತೆ ಇಂದು ಎಲ್ಲಾ ಶಾಸಕರು ಒಟ್ಟಿಗೆ ಅಯೋಧ್ಯೆಗೆ ಪ್ರಯಾಣಿಸಲಿದ್ದಾರೆ ಎಂದರು.

Share This Article