ಮೋದಿ ಸರ್ಕಾರ ಒಂದು ಸಮುದಾಯದ ಅಥವಾ ಒಂದು ಧರ್ಮದ ಸರ್ಕಾರವೇ: ಓವೈಸಿ ಪ್ರಶ್ನೆ

Public TV
1 Min Read

ನವದೆಹಲಿ: ಮರ್ಯಾದಾ ಪುರುಷೋತ್ತಮ್ ರಾಮನನ್ನು ನಾನು ಗೌರವಿಸುತ್ತೇನೆ, ಆದರೆ ನನ್ನ ಜನರು ನಾಥುರಾಮ್ ಗೋಡ್ಸೆಯನ್ನು ದ್ವೇಷಿಸುತ್ತಲೇ ಇರುತ್ತಾರೆ. ಮೋದಿ ಸರ್ಕಾರ ಒಂದು ಸಮುದಾಯದ ಸರ್ಕಾರವೇ ಅಥವಾ ಒಂದು ಧರ್ಮದ ಸರ್ಕಾರವೇ ಅಥವಾ ಇಡೀ ದೇಶದ ಎಲ್ಲಾ ಧರ್ಮಗಳನ್ನು ಅನುಸರಿಸುವ ಜನರ ಸರ್ಕಾರವೇ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯದ ಚರ್ಚೆಯ ಮೇಲೆ ಮಾತನಾಡಿದ ಅವರು, ಸರ್ಕಾರಕ್ಕೆ ಯಾವುದಾದರೂ ಧರ್ಮವಿದೆಯೇ ಜನವರಿ 22 ರ ಸಂದೇಶವನ್ನು ನೀಡುವ ಮೂಲಕ, ಈ ಸರ್ಕಾರವು ಒಂದು ಧರ್ಮವು ಇನ್ನೊಂದು ಧರ್ಮದ ಅನುಯಾಯಿಗಳನ್ನು ಗೆದ್ದಿದೆ ಎಂದು ತೋರಿಸಲು ಬಯಸುತ್ತದೆಯೇ? ಇದಕ್ಕೆ ಸಂವಿಧಾನ ಅವಕಾಶ ನೀಡುತ್ತದೆಯೇ? ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿ: ಅಮಿತ್‌ ಶಾ ಘೋಷಣೆ

ನಮಗೆ 1949 ರಲ್ಲಿ ಮೋಸ, 1986 ರಲ್ಲಿ ಮೋಸ, 1992 ಮತ್ತು 2019 ರಲ್ಲಿ ನಾವು ಈ ಲೋಕಸಭೆಯಲ್ಲೂ ಮೋಸ ಹೋಗಿದ್ದೇವೆ. ಭಾರತದ ನಾಗರಿಕರಾಗಲು ಮುಸ್ಲಿಮರು ಯಾವಾಗಲೂ ಭಾರೀ ಬೆಲೆ ತೆರಬೇಕಾಗಿತ್ತು. ನಾನು ಬಾಬರ್, ಔರಂಗಜೇಬ್ ಅಥವಾ ಜಿನ್ನಾ ಅವರ ವಕ್ತಾರನೇ? ಮರ್ಯಾದಾ ಪುರುಷೋತ್ತಮ್ ರಾಮನನ್ನು ನಾನು ಗೌರವಿಸುತ್ತೇನೆ, ಆದರೆ ನನ್ನ ಜನರು ನಾಥೂರಾಮ್ ಗೋಡ್ಸೆಯನ್ನು ದ್ವೇಷಿಸುತ್ತಾರೆ, ರಾಮನನ್ನು ಪ್ರೀತಿಸುವ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದರು ಎಂದರು.

ಓವೈಸಿ ಮಾತನಾಡುವಾಗ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಬಾಬರ್‌ನನ್ನು ಆಕ್ರಮಣಕಾರ ಎಂದು ಪರಿಗಣಿಸಿದ್ದೀರಾ ಅಥವಾ ಇಲ್ಲವೇ ಎಂದು ಉತ್ತರಿಸುವಂತೆ ಕೇಳಿದರು. ಇದಕ್ಕೆ ಪ್ರತಿಯಾಗಿ ಪ್ರಶ್ನೆಯನ್ನು ಕೇಳಿದ ಓವೈಸಿ, ‘ನೀವು ಪುಷ್ಯಮಿತ್ರ ಶುಂಗವನ್ನು ಏನು ಎಂದು ಪರಿಗಣಿಸುತ್ತೀರಿ? ನನ್ನ ಗುರುತನ್ನು ಅಳಿಸಲು ನಾನು ಬಿಡುವುದಿಲ್ಲ, ಬಿಜೆಪಿಗೆ ಬೇಕಾದ ಕೆಲಸ ನಾನು ಮಾಡುವುದಿಲ್ಲ, ಸಂವಿಧಾನದ ವ್ಯಾಪ್ತಿಯಲ್ಲಿ ಮಾತ್ರ ಕೆಲಸ ಮಾಡುತ್ತೇನೆ ‘ಇಂದು ದೇಶದ ಪ್ರಜಾಪ್ರಭುತ್ವದ ಬೆಳಕು ಅತ್ಯಂತ ಕೆಳಮಟ್ಟದಲ್ಲಿದೆ. ಕೊನೆಯಲ್ಲಿ ನಾನು ಬಾಬರಿ ಮಸೀದಿ ಅಸ್ತಿತ್ವದಲ್ಲಿದೆ ಮತ್ತು ಉಳಿಯುತ್ತದೆ ಎಂದು ಹೇಳುತ್ತೇನೆ. ಬಾಬರಿ ಮಸೀದಿಗೆ ಜಯವಾಗಲಿ, ಭಾರತಕ್ಕೆ ಜಯವಾಗಲಿ ಎಂದು ಹೇಳಿದರು‌.

Share This Article